ಆಪ್ ಎಲ್ಲಾ ಲೆಕ್ಕಾಚಾರ ಉಲ್ಟಾ, ಕೇಜ್ರಿವಾಲ್, ಕೆ ಕವಿತಾ ನ್ಯಾಯಾಂಗ ಬಂಧನ ಮೇ.7ರ ವರೆಗೆ ವಿಸ್ತರಣೆ!
ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಜೈಲು ಪಾಲಾಗಿರುವ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ಬಿಆರ್ಎಸ್ ನಾಯಕಿ ಕೆ ಕವತಿ ನ್ಯಾಯಾಂಗ ಬಂಧನ ಅವಧಿ ಮೇ.7ರ ವರೆಗೆ ವಿಸ್ತರಿಸಲಾಗಿದೆ. ರೋಸ್ ಅವೆನ್ಯೂ ಕೋರ್ಟ್ ಆದೇಶ ಆಪ್ ಲೆಕ್ಕಾಚಾರವನ್ನೇ ಉಲ್ಟಾ ಮಾಡಿದೆ.
ದೆಹಲಿ(ಏ.23) ದಹೆಲಿ ಅಬಕಾರಿ ನೀತಿ ಹಗರಣದ ತನಿಖೆಯಲ್ಲಿ ಸ್ಫೋಟಕ ಮಾಹಿತಿಗಳು ಬಹಿರಂಗವಾಗುತ್ತಿದೆ. ಇತ್ತ ರಾಜಕೀಯವೂ ಜೋರಾಗುತ್ತಿದೆ. ನಾಯಕರ ಬಂಧನ ರಾಜಕೀಯ ಪ್ರೇರಿತ ಅನ್ನೋದು ಆಪ್ ಹಾಗೂ ವಿಪಕ್ಷಗಳ ಆರೋಪ. ಆದರೆ ದಾಖಲೆಗಳ ಪರಿಶೀಲಿಸುತ್ತಿರುವ ಕೋರ್ಟ್ ನಾಯಕರಿಗೆ ಜಾಮೀನು ನೀಡಲು ನಿರಾಕರಿಸುತ್ತಿದೆ. ಇಡಿ ಅಧಿಕಾರಿಗಳಿಂದ ಅರೆಸ್ಟ್ ಆಗಿ ಜೈಲು ಸೇರಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ಬಿಆರ್ಎಸ್ ನಾಯಕಿ ಕವಿತ ನ್ಯಾಯಾಂಗ ಬಂಧನ ಅವಧಿಯನ್ನು ರೋಸ್ ಅವೆನ್ಯೂ ಕೋರ್ಟ್ ಮೇ.7ರ ವರೆಗೆ ವಿಸ್ತರಿಸಿದೆ. ಕೋರ್ಟ್ ಆದೇಶ ಹೊರಬೀಳುತ್ತಿದ್ದಂತೆ ಆಪ್ ಲೆಕ್ಕಾಚಾರಗಳು ಉಲ್ಟಾ ಆಗಿದೆ.
ಕೇಜ್ರಿವಾಲ್ ಹಾಗೂ ಕೆ ಕವಿತಾ ನ್ಯಾಯಾಂಗ ಬಂಧನ ಅವಧಿ ಮೇ.23ಕ್ಕೆ ಅಂತ್ಯವಾಗಿತ್ತು. ಹೀಗಾಗಿ ಇಂದು ರೋಸ್ ಅವೆನ್ಯೂ ಕೋರ್ಟ್ಗೆ ಇಡಿ ಅಧಿಕಾರಿಗಳು ಇಬ್ಬರು ನಾಯಕರನ್ನು ವರ್ಚುವಲ್ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಿದ್ದರು. ಈ ವೇಳೆ ಕೋರ್ಟ್ ನ್ಯಾಯಾಂಗ ಬಂಧನ ಅವಧಿಯನ್ನು ಮೇ.7ರ ವರೆಗೆ ವಿಸ್ತರಿಸಿದೆ. ಇದೇ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಚರಣಪ್ರೀತ್ ಸಿಂಗ್ ನ್ಯಾಯಾಂಗ ಬಂಧನ ಅವಧಿಯನ್ನು ಕೋರ್ಟ್ ವಿಸ್ತರಿಸಿದೆ.
ಕೇಜ್ರಿವಾಲ್ಗೆ ಜಾಮೀನು ಕೋರಿ ಸಲ್ಲಿಸಿದ್ದ ಪಿಐಎಲ್ ತಿರಸ್ಕೃತ, ಅರ್ಜಿದಾರನಿಗೆ 75,000 ರೂ ದಂಡ!
ಅರವಿಂದ್ ಕೇಜ್ರಿವಾಲ್ ಬಿಡುಗಡೆಗೆ ಸ್ವತಃ ಕೇಜ್ರಿವಾಲ್ ಹಾಗೂ ಆಪ್ ನಾಯಕರು ಅವಿರತ ಪ್ರಯತ್ನ ಮಾಡುತ್ತಿದ್ದಾರೆ. ಇಂಜೆಕ್ಷನ್, ಡಯಾಬಿಟಿಕ್ ಔಷಧಿ ಸೇರಿದಂತೆ ಹಲವು ಆರೋಗ್ಯ ಕಾರಣಗಳನ್ನು ನೀಡಿದರೂ ಕೋರ್ಟ್ ಜಾಮೀನು ನೀಡಿಲ್ಲ. ಇಷ್ಟೇ ಅಲ್ಲ ಇದೇ ವೇಳೆ ಕೇಜ್ರಿವಾಲ್ ಅವರಿದೆ ಅಸಾಧಾರಣ ಮಧ್ಯಂತರ ಜಾಮೀನು ನೀಡಬೇಕು ಎಂದು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.
ಕೇಜ್ರಿವಾಲ್ಗೆ ಜಾಮೀನು ಕೊಡಿಸಿ ಚುನಾವಣೆ ಹೊತ್ತಲ್ಲಿ ಧೂಳೆಬ್ಬಿಸಲು ಆಪ್ ಭಾರಿ ಲೆಕ್ಕಾಚಾರ ಹಾಕಿತ್ತು. ಬಂಧನ ಹಿಂದೆ ಬಿಜೆಪಿ ಕೈವಾಡ. ಇದು ರಾಜಕೀಯ ಪ್ರೇರಿತ ಅನ್ನೋ ಆರೋಪವನ್ನು ಚುನಾವಣಾ ಸಮಾವೇಶದಲ್ಲಿ ಮಾಡುವ ಮೂಲಕ ಮತಗಳಾಗಿ ಪರಿವರ್ತಿಸಲು ಆಪ್ ತಯಾರಿ ನಡೆಸಿತ್ತು. ಆದರೆ ಕೇಜ್ರಿವಾಲ್ಗೆ ಮತ್ತೆ ಜೈಲೇ ಗತಿಯಾಗಿದೆ.
ವೈದ್ಯರ ಸೂಚನೆ ಮೀರಿ, ಶುಗರ್ ಏರುವ ಆಹಾರವನ್ನು ಅರವಿಂದ್ ಕೇಜ್ರಿವಾಲ್ಗೆ ನೀಡಲಾಗಿದೆ: ಕೋರ್ಟ್
ಇತ್ತೀಚೆಗೆ ತಿಹಾರ್ ಜೈಲು ಆಡಳಿತ ಇನ್ಸುಲಿನ್ ನೀಡುತ್ತಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆರೋಪಿಸಿದ ಬೆನ್ನಲ್ಲೇ ದೆಹಲಿ ಹೈಕೋರ್ಟ್ ಅವರ ಸಕ್ಕರೆ ಮಟ್ಟ ನಿಯಂತ್ರಿಸಲು ಇನ್ಸುಲಿನ್ ಅಗತ್ಯವಿದೆಯೇ ಎಂದು ನಿರ್ಧರಿಸಲು ಮತ್ತು ಇತರೆ ವೈದ್ಯಕೀಯ ಸೇವೆಗಳನ್ನು ಪರಿಗಣಿಸಲು ವೈದ್ಯಕೀಯ ಮಂಡಳಿಯನ್ನು ರಚಿಸುವಂತೆ ಸೋಮವಾರ ಏಮ್ಸ್ಗೆ ನಿರ್ದೇಶನ ನೀಡಿದೆ. ಆದರೆ ನಿತ್ಯವೂ ವೈದ್ಯರ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ವೈದ್ಯಕೀಯ ತಪಾಸಣೆಗೆ ಅವಕಾಶ ನೀಡಬೇಕೆಂಬ ಕೇಜ್ರಿವಾಲ್ ಬೇಡಿಕೆಯನ್ನು ಹೈಕೋರ್ಟ್ ತಿರಸ್ಕರಿಸಿದೆ.