108 ಸಿಬ್ಬಂದಿಯ ಧನದಾಹಕ್ಕೆ ಬಾಲಕ ಬಲಿ: ಲಂಚಕ್ಕೆ ಬೇಡಿಕೆಯಿಟ್ಟು ತಡವಾಗಿ ಬಂದ ಸಿಬ್ಬಂದಿ
ತೀವ್ರ ಜ್ವರದಿಂದ ಬಳಲುತ್ತಿದ್ದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲು 108 ಆ್ಯಂಬುಲೆನ್ಸ್ಗೆ ಕರೆ ಮಾಡಿದ್ದಾರೆ. ಆದ್ರೆ ಆತ ಲಂಚಕ್ಕೆ ಬೇಡಿಕೆಯಿಟ್ಟು, 2 ಗಂಟೆ ತಡವಾಗಿ ಬಂದಿದ್ದಾನೆ. ನಂತರ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಬಾಲಕ ಸಾವನ್ನಪ್ಪಿದ್ದಾನೆ. ಇನ್ನೂ ರಾಜ್ಯದ್ಯಂತ ಡೆಂಘೀ ನರ್ತನ ಮುಂದುವರೆದಿದೆ.
ತುಮಕೂರು(ಜು.19): ತೀವ್ರ ಜ್ವರದಿಂದ ಬಳಲುತ್ತಿದ್ದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲು 108 ಆ್ಯಂಬುಲೆನ್ಸ್ಗೆ ಕರೆ ಮಾಡಿದ್ದಾರೆ. ಆದ್ರೆ ಆತ ಲಂಚಕ್ಕೆ ಬೇಡಿಕೆಯಿಟ್ಟು, 2 ಗಂಟೆ ತಡವಾಗಿ ಬಂದಿದ್ದಾನೆ. ನಂತರ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಬಾಲಕ ಸಾವನ್ನಪ್ಪಿದ್ದಾನೆ. ಇನ್ನೂ ರಾಜ್ಯದ್ಯಂತ ಡೆಂಘೀ ನರ್ತನ ಮುಂದುವರೆದಿದೆ.
ಡೆಂಘೀ ರೋಗಕ್ಕೆ ಸರಿಯಾದ ಚಿಕಿತ್ಸೆ ಸಿಗ್ತಿಲ್ಲ ಅನ್ನೋ ಆರೋಪ ಒಂದೆಡೆಯಾದರೆ, ಆರೋಗ್ಯ ಇಲಾಖೆ ಸಿಬ್ಬಂದಿಗಳ ಲಂಚಬಾಕತನ ಮತ್ತೊಂದೆಡೆ. ಇದಕ್ಕೆ ಸಾಕ್ಷಿ ಎಂಬಂತೆ ತುಮಕೂರಲ್ಲಿ 108 ಸಿಬ್ಬಂದಿಯ ಲಂಚಬಾಕತನಕ್ಕೆ ಬಾಲಕ ಶ್ರೀನಿಧಿ ಬಲಿಯಾಗಿದ್ದಾನೆ.
ಡೆಂಘಿಯಿಂದ ಬಳಲುತ್ತಿದ್ದ ಬಾಲಕ ಶ್ರೀನಿಧಿಯನ್ನು ಪಾವಗಡ ಆಸ್ಪತ್ರೆಯಿಂದ ತುಮಕೂರು ಜಿಲ್ಲಾಸ್ಪತ್ರೆಗೆ ಸಾಗಿಸಲು 108 ಸಿಬ್ಬಂದಿ ಲಂಚ ಬೇಡಿಕೆ ಇಟ್ಟಿದ್ದಾರೆ. ಪರಿಣಾಮ 2 ಗಂಟೆ ತಡವಾಗಿ ಬಂದು ಬಾಲಕನನ್ನು ಸಾಗಿಸುವಾಗ ದಾರಿ ಮಧ್ಯೆ ಬಾಲಕ ಶ್ರೀನಿಧಿ ಪ್ರಾಣಬಿಟ್ಟಿದ್ದಾನೆ. ಇತ್ತ ಮಂಡ್ಯದಲ್ಲೂ ಮಹಾಮಾರಿ ಡೆಂಘೀ ಬಾಲಕನೋರ್ವನನ್ನು ಬಲಿ ತೆಗೆದುಕೊಂಡಿದೆ. ಮಂಡ್ಯ ತಾಲೂಕಿನ ಹೊನಗಾನಹಳ್ಳಿ ಮಠ ಗ್ರಾಮದ ಹೇಮಂತ್ ತೀವ್ರ ಜ್ವರಕ್ಕೆ ಬಲಿಯಾಗಿದ್ದಾನೆ.
ಇತ್ತ ಹುಬ್ಬಳ್ಳಿಯಲ್ಲೂ ಸುಮಾರು 35 ಮಂದಿಗೆ ಡೆಂಘೀ ರೋಗ ಪತ್ತೆಯಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ದಿನೇ ದಿನೇ ಡೆಂಘೀ ತೀವ್ರವಾಗ್ತಿರೋದನ್ನ ಗಮನಿಸಿದ ಜಿಲ್ಲಾ ಆರೋಗ್ಯ ಇಲಾಖೆ ಜಾಗೃತಿ ಅಭಿಯಾನ ನಡೆಸುತ್ತಿದೆ. ಈ ಅಭಿಯಾನಕ್ಕೆ ಹುಬ್ಬಳ್ಳಿ ಯುವಕರು, ಕೈ ಜೋಡಿಸಿದ್ದು ಡೆಂಘೀ ಅರಿವು ಕಾರ್ಯಕ್ರಮ ಬರದಿಂದ ಸಾಗಿದೆ. ಜತೆಗೆ ಆರೋಗ್ಯ ಇಲಾಖೆಯಿಂದ ಪ್ರತಿ ಮನೆಗೂ ಪಿನಾಯಿಲ್ ವಿತರಣೆ ಮಾಡಲಾಗುತ್ತಿದೆ.