ಚಿತ್ತೂರು ಬಳಿ ಭೀಕರ ಅಪಘಾತ; 21 ಮಂದಿ ಸ್ಥಳದಲ್ಲೇ ಸಾವು
ತಿರುಪತಿಯಿಂದ ಕಾಳಹಸ್ತಿಗೆ ಹೋಗುತ್ತಿದ್ದ ಟ್ರಕ್ ನಿಯಂತ್ರಣ ತಪ್ಪಿ ಈ ಗ್ರಾಮಸ್ಥರಿದ್ದ ಅಂಗಡಿಗೆ ನುಗ್ಗಿತು. 21 ಜನರು ಸ್ಥಳದಲ್ಲೇ ಮೃತಪಟ್ಟರು. 16ಕ್ಕೂ ಹೆಚ್ಚು ಜನರು ಗಾಯಗೊಂಡರು.
ಚಿತ್ತೂರು(ಏ. 21): ಲಾರಿಯೊಂದು ನಿಯಂತ್ರಣ ತಪ್ಪಿ ಅಂಗಡಿಗೆ ನುಗ್ಗಿದ್ದರಿಂದ 21 ಜನರು ಸ್ಥಳದಲ್ಲೇ ಸಾವನ್ನಪ್ಪಿ, ಹಲವು ಮಂದಿ ಗಾಯಗೊಂಡಿರುವ ಘೋರ ಘಟನೆ ಆಂಧ್ರಪ್ರದೇಶದಲ್ಲಿ ಸಂಭವಿಸಿದೆ. ಚಿತ್ತೂರು ಜಿಲ್ಲೆಯ ಎರ್ಪೆಡು ಪಟ್ಟಣದ ಪೊಲೀಸ್ ಠಾಣೆಯ ಬಳಿ ಶುಕ್ರವಾರ ಮಧ್ಯಾಹ್ನ ಈ ದುರ್ಘಟನೆ ನಡೆದಿದೆ.
ಮೃತಪಟ್ಟವರೆಲ್ಲರೂ ಮುನಗಲಪಾಡು ಗ್ರಾಮದವರೆಂದು ಗುರುತಿಸಲಾಗಿದೆ. ಸ್ವರ್ಣಮುಖಿ ನದಿಯಲ್ಲಿ ಮರಳುಗಾರಿಕೆ ನಿಷೇಧಿಸಬೇಕೆಂದು ಗ್ರಾಮಸ್ಥರು ಪೊಲೀಸ್ ಠಾಣೆಯಲ್ಲಿ ಮನವಿ ಸಲ್ಲಿಸಲು ಅಲ್ಲಿಗೆ ಆಗಮಿಸಿದ್ದರು. ಅದಕ್ಕಾಗಿ ಪೊಲೀಸ್ ಠಾಣೆಯ ಪಕ್ಕದ ಅಂಗಡಿ ಬಳಿ ಗ್ರಾಮಸ್ಥರು ನೆರೆದಿದ್ದರು.
ತಿರುಪತಿಯಿಂದ ಕಾಳಹಸ್ತಿಗೆ ಹೋಗುತ್ತಿದ್ದ ಟ್ರಕ್ ನಿಯಂತ್ರಣ ತಪ್ಪಿ ಈ ಗ್ರಾಮಸ್ಥರಿದ್ದ ಅಂಗಡಿಗೆ ನುಗ್ಗಿತು. 21 ಜನರು ಸ್ಥಳದಲ್ಲೇ ಮೃತಪಟ್ಟರು. 16ಕ್ಕೂ ಹೆಚ್ಚು ಜನರು ಗಾಯಗೊಂಡರು. ಹಲವು ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಭೀತಿ ಇದೆ. ಲಾರಿಗೆ ಸಿಕ್ಕು ಮೃತಪಟ್ಟಿದ್ದಕಿಂತ, ವಿದ್ಯುತ್ ತಂತಿ ಕಿತ್ತುಬಿದ್ದಿದ್ದರಿಂದ ವಿದ್ಯುದಾಘಾತಕ್ಕೊಳಗಾಗಿ ಸತ್ತವರೇ ಹೆಚ್ಚು ಮಂದಿ.
ಘಟನೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳಿಗೂ ಗಾಯವಾಗಿದೆ. ಇದೇ ವೇಳೆ, ಲಾರಿಯ ಡ್ರೈವರ್ ಮತ್ತು ಕ್ಲೀನರ್ ಇಬ್ಬರೂ ಪರಾರಿಯಾಗಿದ್ದಾರೆ.