ಸಂಸತ್’ನಲ್ಲಿ ನಾನು ಮಾತನಾಡಿದರೆ ಭೂಕಂಪವೇ ಆಗಿಬಿಡುತ್ತೆ: ರಾಹುಲ್ ಗಾಂಧಿ
ನಗದು ಅಮಾನ್ಯೀಕರಣವು ದೇಶದ ಅತ್ಯಂತ ದೊಡ್ಡ ಹಗರಣ ಎಂದು ಬಣ್ಣಿಸಿದ ರಾಹುಲ್ ಗಾಂಧಿ, ಸಂಸತ್’ನಲ್ಲಿ ತಾನು ಈ ಬಗ್ಗೆ ಮಾತನಾಡಲು ಸದಾ ಸಿದ್ಧ ಎಂದು ಹೇಳಿದ್ದಾರೆ.
ನವದೆಹಲಿ(ಡಿ. 09): ನೋಟ್ ಅಮಾನ್ಯ ಕ್ರಮದ ಬಗ್ಗೆ ಸಂಸತ್’ನಲ್ಲಿ ತಾನು ಮಾತನಾಡಲು ಸಿದ್ಧ. ಆದರೆ, ಸರಕಾರ ಇದಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. “ಒಂದು ತಿಂಗಳಿನಿಂದ ಸಂಸತ್’ನಲ್ಲಿ ಮಾತನಾಡಬೇಕೆಂದು ಪ್ರಯತ್ನಿಸುತ್ತಲೇ ಇದ್ದೇನೆ. ಸಂಸತ್’ನಲ್ಲಿ ನಾನು ಮಾತನಾಡಿದರೆ ಭೂಕಂಪವೇ ಸಂಭವಿಸಿಬಿಡುತ್ತದೆ. ದೊಡ್ಡ ಹಗರಣದ ಬಗ್ಗೆ ಮಾತನಾಡುತ್ತೇನೆಂಬ ಭಯ ಸರಕಾರಕ್ಕೆ ಇದೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.
“ಪ್ರಧಾನಿಯವರು ದೇಶಾದ್ಯಂತ ಭಾಷಣಗಳನ್ನು ಕೊಡುತ್ತಿದ್ದಾರೆ. ಆದರೆ ಲೋಕಸಭೆಗೆ ಬರಲು ಹೆದರುತ್ತಾರೆ. ಸಂಸತ್’ನಲ್ಲೇ ಇರುತ್ತಾರಾದರೂ ಲೋಕಸಭೆಗೆ ಬಂದು ಕೂರುವುದಿಲ್ಲ. ಯಾಕೆ ಅವರು ಇಷ್ಟು ದುಗುಡಗೊಂಡಿದ್ದಾರೆ? ಮೊದಲು ಕಪ್ಪುಹಣದ ಬಗ್ಗೆ ಮಾತನಾಡಿದರು, ನಂತರ, ಖೋಟಾ ನೋಟಿನ ಹೆಸರು ತೆಗೆದರು. ಈಗ ಕ್ಯಾಷ್’ಲೆಸ್ ಬಗ್ಗೆ ಮಾತನಾಡುತ್ತಿದ್ದಾರೆ. ನೀವು ಸದನಕ್ಕೆ ಬಂದು ನಮ್ಮೊಂದಿಗೆ ಮಾತನಾಡಿ” ಎಂದು ರಾಹುಲ್ ಗಾಂಧಿ ಆಹ್ವಾನ ಕೊಟ್ಟಿದ್ದಾರೆ.
ನಗದು ಅಮಾನ್ಯೀಕರಣವು ದೇಶದ ಅತ್ಯಂತ ದೊಡ್ಡ ಹಗರಣ ಎಂದು ಬಣ್ಣಿಸಿದ ರಾಹುಲ್ ಗಾಂಧಿ, ಸಂಸತ್’ನಲ್ಲಿ ತಾನು ಈ ಬಗ್ಗೆ ಮಾತನಾಡಲು ಸದಾ ಸಿದ್ಧ ಎಂದು ಹೇಳಿದ್ದಾರೆ.