ಸರ್ಜರಿ ನಡೆಯುತ್ತಿದ್ದರೂ ಗಿಟಾರ್ ನುಡಿಸಿದ ರೋಗಿ! ಬೆಂಗಳೂರಿನ ವೈದ್ಯರಿಂದ ಹೀಗೊಂದು ಅಪರೂಪದ ಶಸ್ತ್ರಚಿಕಿತ್ಸೆ
ಬೆಂಗಳೂರಿನ ವೈದ್ಯಕೀಯ ರಂಗದಲ್ಲಿ ವಿಶಿಷ್ಟವಾದ ಬೆಳವಣಿಗೆ ನಡೆದಿದೆ. ಶಸ್ತ್ರ ಚಿಕಿತ್ಸೆ ನಡೆಯುತ್ತಿರುವ ಜೊತೆಗೆ ರೋಗಿಯು ಗಿಟಾರ್ ನುಡಿಸುತ್ತಿದ್ದ ಘಟನೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.
ಬೆಂಗಳೂರು: ಬೆಂಗಳೂರಿನ ವೈದ್ಯಕೀಯ ರಂಗದಲ್ಲಿ ವಿಶಿಷ್ಟವಾದ ಬೆಳವಣಿಗೆ ನಡೆದಿದೆ. ಶಸ್ತ್ರ ಚಿಕಿತ್ಸೆ ನಡೆಯುತ್ತಿರುವ ಜೊತೆಗೆ ರೋಗಿಯು ಗಿಟಾರ್ ನುಡಿಸುತ್ತಿದ್ದ ಘಟನೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.
ಇದು ಯಾವುದೋ ಮ್ಯೂಸಿಕ್ ಹುಚ್ಚಲ್ಲ, ಬದಲಾಗಿ ವ್ಯಕ್ತಿಗಿದ್ದ ಕಾಯಿಲೆಗೆ ಸಮರ್ಪಕ ಚಿಕಿತ್ಸೆ ನೀಡುವಲ್ಲಿ ವೈದ್ಯರ ಪ್ರಯತ್ನ ಇದಾಗಿತ್ತು.
ಮಹಾವೀರ್ ಜೈನ್ ಆಸ್ಪತ್ರೆಯ ವೈದ್ಯರು ದೇಶದಲ್ಲಿ ಪ್ರಥಮ ಬಾರಿಗೆ ಬ್ರೈನ್ ಸರ್ಕ್ಯೂಟ್ ಸರ್ಜರಿಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ಸಂಗೀತಕಾರನೊಬ್ಬನ ಅಪರೂಪದ ಕಾಯಿಲೆಯನ್ನು ಗುಣಪಡಿಸುವ ಪ್ರಯತ್ನ ನಡೆಸಿದ್ದಾರೆ.
ಬಿಹಾರ ಮೂಲದ ಅಭೀಶೇಕ್ ಪ್ರಸಾದ್ ಗಿಟಾರ್ ನುಡಿಸುವವರಾಗಿದ್ದು, ಗಿಟಾರಿಸ್ಟ್ ಡೈಸ್ಟೋನಿಯಾ ಎಂಬ ಬೆರಳುಗಳು ತಿರುಚುವ ವಿಚಿತ್ರ ಕಾಯಿಲೆಗೊಳಗಾಗಿದ್ದರು.
ಗಿಟಾರ್ ನುಡಿಸುವ ಸಂದರ್ಭದಲ್ಲಿ ಮಾತ್ರ ರೋಗಿಯು ಸಮಸ್ಯೆಯನ್ನು ಎದುರಿಸುತ್ತಿದ್ದರು. ಕಾಯಿಲೆಗೆ ಸರಿಯಾದ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ರೋಗಿಯು ಎಚ್ಚರವಿದ್ದು, ಗಿಟಾರ್ ನುಡಿಸುವುದು ಅಗತ್ಯವಾಗಿತ್ತು. ಆ ಹಿನ್ನೆಲೆಯಲ್ಲಿ ಡಾ. ಸಂಜೀವ್ ಸಿ.ಸಿ ನೇತೃತ್ವದ ವೈದ್ಯರ ತಂಡವು ರೋಗಿ ಕೈಗೆ ಗಿಟಾರ್ ಕೊಟ್ಟು ಶಸತ್ರಚಿಕಿತ್ಸೆ ನಡೆಸಿದ್ದಾರೆ.
ಶೇ. 1 ವೃತ್ತಿಪರ ಗಿಟಾರ್ ನುಡಿಸುವವರಲ್ಲಿ ಈ ಕಾಯಿಲೆ ಕಂಡು ಬರುತ್ತದೆ. ಗಿಟಾರ್ ನುಡಿಸುವಾಗ ಅವರ ಬೆರಳುಗಳ ಚಲನವಲನಗಳ ಮೇಲೆ ದುಷ್ಪರಿಣಾಮ ಬೀರುತ್ತದೆ.
ಶಸ್ತ್ರಚಿಕಿತ್ಸೆ ಸಂಪೂರ್ಣ ಯಶಸ್ವಿಯಾಗಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಅಭಿಶೇಕ್, ಇದೊಂದು ಅದ್ಭುತ ಅನುಭವವಾಗಿತ್ತು ಎಂದು ಹೇಳಿದ್ದಾರೆ.
(ಚಿತ್ರ: ಪಿಟಿಐ)