ಕಮ್ಮನಹಳ್ಳಿ ಪ್ರಕರಣ: ಲೈಂಗಿಕ ದೌರ್ಜನ್ಯಕ್ಕೊಳಗಾದ ಹುಡುಗಿಯಿಂದಲೇ ಆರೋಪಿಗಳು ಬಚಾವ್?
ಯುವತಿ ಪರೇಡ್ಗೆ ಹಾಜರಾಗದಿದ್ರೆ ಪೊಲೀಸ್ ತನಿಖೆಗೆ ಹಿನ್ನಡೆ ಆಗಲಿದೆ. ಇದರಿಂದಾಗಿ ಆರೋಪಿಗಳಿಗೆ ಜಾಮೀನು ಮಂಜೂರಾಗುವ ಸಾಧ್ಯತೆ ಹೆಚ್ಚಾಗಿದ್ದು, ಆರೋಪಿಗಳು ಪ್ರಕರಣದಿಂದ ಬಚಾವ್ ಆದರೂ ಆಗಬಹುದು.
ಬೆಂಗಳೂರು(ಫೆ. 27): ಕಮ್ಮನಹಳ್ಳಿ ಯುವತಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕೆಂಬುದು ಎಲ್ಲರ ಒತ್ತಾಯ. ಆದ್ರೆ, ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು ಪ್ರಕರಣದಿಂದ ಬಚಾವ್ ಆಗುವ ಸಾಧ್ಯತೆಯಿದೆ. ಯಾಕಂದ್ರೆ ದೌರ್ಜನ್ಯಕ್ಕೊಳಗಾದ ಯುವತಿಯೇ ಪೊಲೀಸರ ತನಿಖೆಗೆ ಸ್ಪಂದಿಸದೇ ಮನೆ ಖಾಲಿ ಮಾಡಿದ್ದಾಳೆ.
ಪ್ರಕರಣ ಸಂಬಂಧ ನಾಳೆ 5ನೇ ಬಾರಿ ಆರೋಪಿಗಳ ಗುರುತು ಪತ್ತೆ ಹಚ್ಚಲು ಪರೇಡ್ ಇದೆ. ಆದ್ರೆ ಸಂತ್ರಸ್ತ ಯುವತಿ ಮನೆ ಖಾಲಿ ಮಾಡಿದ್ದಾಳೆ. ಇದೇ ರೀತಿ ಸಂತ್ರಸ್ತೆ ಈ ಹಿಂದೆ ಗೈರಾದ ಹಿನ್ನೆಲೆಯಲ್ಲಿ ನಾಲ್ಕು ಬಾರಿ ಪರೇಡ್ ರದ್ದಾಗಿತ್ತು. ಎಸಿಪಿ ರವಿಕುಮಾರ್ ನೇತೃತ್ವದ ತಂಡದಿಂದ ಯುವತಿಯ ಮನವೊಲಿಸುವ ಪ್ರಯತ್ನ ವಿಫಲವಾಗಿದೆ ಎಂದು ತಿಳಿದುಬಂದಿದೆ. ನಾಳೆ ಯುವತಿ ಪರೇಡ್ಗೆ ಹಾಜರಾಗದಿದ್ರೆ ಪೊಲೀಸ್ ತನಿಖೆಗೆ ಹಿನ್ನಡೆ ಆಗಲಿದೆ. ಇದರಿಂದಾಗಿ ಆರೋಪಿಗಳಿಗೆ ಜಾಮೀನು ಮಂಜೂರಾಗುವ ಸಾಧ್ಯತೆ ಹೆಚ್ಚಾಗಿದ್ದು, ಆರೋಪಿಗಳು ಪ್ರಕರಣದಿಂದ ಬಚಾವ್ ಆದರೂ ಆಗಬಹುದು.
ಏನಿದು ಪ್ರಕರಣ?
ಡಿಸೆಂಬರ್ 31ರ ರಾತ್ರಿ ಎಂಜಿ ರಸ್ತೆಯಲ್ಲಿ ಪಾರ್ಟಿ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಯುವತಿಯನ್ನು ಬೈಕ್'ನಲ್ಲಿ ಬಂದ ದುಷ್ಕರ್ಮಿಗಳು ಲೈಂಗಿಕ ದೌರ್ಜನ್ಯ ನಡೆಸಿದ್ದರು. ಈ ದೃಶ್ಯ ಅಲ್ಲಿಯೇ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸಿಸಿಟಿವಿಯಲ್ಲಿ ಕಾಮುಕರ ಕೃತ್ಯ ಸೆರೆಯಾಗಿದ್ದ ಹಿನ್ನೆಲೆಯಲ್ಲಿ ಇಡೀ ಪ್ರಕರಣ ಮಹತ್ವ ಪಡೆದುಕೊಂಡಿತ್ತು. ಬಾಣಸವಾಡಿ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡು ಆರು ಆರೋಪಿಗಳನ್ನು ಬಂಧಿಸಿದ್ದರು. ಆದ್ರೆ ಈಗ ಸಂತ್ರಸ್ತ ಯುವತಿಯು ಆರೋಪಿಗಳನ್ನು ಗುರುತು ಪತ್ತೆ ಕಾರ್ಯ ನಡೆಸದಿರುವುದರಿಂದ ಆರೋಪಿಗಳು ಕೇಸ್'ನಿಂದ ಖುಲಾಸೆಯಾಗುವ ಆತಂಕವಿದೆ.