ನೆರೆ ರಾಜ್ಯದ ಪಕ್ಷಕ್ಕೆ ಜೆಡಿಎಸ್ ಬಂಡಾಯ ಶಾಸಕರು !
ಈಗಾಗಲೇ ಶರದ್ ಪವಾರ್ ಜೊತೆ ಜಮೀರ್ ಅಹಮದ್ ಒಂದು ಬಾರಿ ಮುಂಬೈನಲ್ಲಿ ಮಾತುಕತೆಯನ್ನೂ ಮುಗಿಸಿದ್ದು, ಬೆಂಗಳೂರಿಗೆ ಬಂದಾಗ 8 ಜನ ಅಮಾನತುಗೊಂಡ ಶಾಸಕರ ಜೊತೆ ಮಾತುಕತೆ ನಡೆಸುವ ಇಂಗಿತವನ್ನು ಪವಾರ್ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಬೆಂಗಳೂರು(ಅ.27): ಜೆಡಿಎಸ್'ನ 8 ಜನ ಭಿನ್ನಮತೀಯ ಶಾಸಕರ ವಿರುದ್ಧ ಅನರ್ಹತೆಯ ದೂರಿನ ವಿಚಾರಣೆ ಮುಂದುವರಿದಿರುವಾಗಲೇ ರೆಬೆಲ್ ಶಾಸಕರಿಗೆ ಹೊಸ ರಾಜಕೀಯದ ಆಫರ್ ಸಿಕ್ಕಿದೆ. ಬಂಡಾಯ ಶಾಸಕರ ಮೇಲೆ ಕಣ್ಣು ಹಾಕಿರುವ ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ರಾಜ್ಯದಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವನ್ನು ಬಲವರ್ಧನೆಗೊಳಿಸುವ ಆಹ್ವಾನ ನೀಡಿದ್ದಾರೆ.
ಈಗಾಗಲೇ ಶರದ್ ಪವಾರ್ ಜೊತೆ ಜಮೀರ್ ಅಹಮದ್ ಒಂದು ಬಾರಿ ಮುಂಬೈನಲ್ಲಿ ಮಾತುಕತೆಯನ್ನೂ ಮುಗಿಸಿದ್ದು, ಬೆಂಗಳೂರಿಗೆ ಬಂದಾಗ 8 ಜನ ಅಮಾನತುಗೊಂಡ ಶಾಸಕರ ಜೊತೆ ಮಾತುಕತೆ ನಡೆಸುವ ಇಂಗಿತವನ್ನು ಪವಾರ್ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಬಹುತೇಕ ದೀಪಾವಳಿ ಹಬ್ಬದ ಬಳಿಕ ಈ ಪ್ರಕ್ರಿಯೆಗೆ ವೇಗ ದೊರಕಲಿದ್ದು, ಶೀಘ್ರವೇ ಬೆಂಗಳೂರಿಗೆ ಬರಲಿರುವ ಶರದ್ ಪವಾರ್ ಜೊತೆ ಬಂಡಾಯ ಶಾಸಕರು ಮಾತುಕತೆ ನಡೆಸಲಿದ್ದಾರೆ. ಎಲ್ಲವೂ ಸಹಮತಕ್ಕೆ ಬಂದಲ್ಲಿ 8 ಬಂಡಾಯ ಶಾಸಕರು ರಾಜ್ಯದಲ್ಲಿ ಎನ್ಸಿಪಿ ಪಕ್ಷವನ್ನು ಬಲವರ್ಧಿಸುವ ಕೆಲಸಕ್ಕೆ ಮುಂದಾಗುವ ಸಾಧ್ಯತೆಯಿದೆ. ಆದರೆ ಯಾವುದೇ ನೆಲೆ ಇಲ್ಲದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷಕ್ಕೆ ನೆಲೆ ಕಾಣಿಸುವುದು ಸದ್ಯದ ರಾಜ್ಯ ರಾಜಕೀಯ ಪರಿಸ್ಥಿತಿಯಲ್ಲಿ ಕಷ್ಟದ ಮಾತಾಗಿದೆ.
ಹಾಗಂತ ರಾಜ್ಯದಲ್ಲಿ ಎನ್ಸಿಪಿ ಕಟ್ಟುವ ಮಾತು ಕೇಳಿ ಬಂದಿರುವುದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೊಮ್ಮೆ ಅಫ್ಜಲ್ಪುರ ಶಾಸಕ ಮಾಲೀಕಯ್ಯ ಗುತ್ತೇದಾರ್ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರು ಎನ್ಸಿಪಿಗೆ ವಲಸೆ ಹೊರಟು ನಿಂತಿದ್ದರು. ಆದರೆ ಅದು ಕೊನೆಯ ಕ್ಷಣದಲ್ಲಿ ವರ್ಕೌಟ್ ಆಗಿರಲಿಲ್ಲ. ಇದೀಗ ಮತ್ತೆ ಬಂಡಾಯ ಶಾಸಕರನ್ನು ಸೆಳೆಯಲು ಎನ್ಸಿಪಿ ಮುಂದಾಗಿದ್ದು ಎಷ್ಟರ ಮಟ್ಟಿಗೆ ಫಲ ಕೊಡುತ್ತೋ ಗೊತ್ತಿಲ್ಲ.
ವರದಿ: ಕಿರಣ್ ಹನಿಯಡ್ಕ, ಸುವರ್ಣ ನ್ಯೂಸ್