ಡೈರಿ ಬಿಡುಗಡೆ ಹಿಂದೆ ನರೇಂದ್ರ ಮೋದಿ ಷಡ್ಯಂತ್ರ ಕೆಪಿಸಿಸಿ ಆರೋಪ
ಹೈಕಮಾಂಡ್'ಗೆ ಕಪ್ಪ ನೀಡಿರುವ ಡೈರಿಯ ಅಂಶಗಳು ಬಹಿರಂಗವಾಗಿದ್ದರೂ ಅದನ್ನು ಸುಲಭವಾಗಿ ಒಪ್ಪಿಕೊಳ್ಳಲು ಕಾಂಗ್ರೆಸ್ ಸಿದ್ಧವಿಲ್ಲ. ಬದಲಾಗಿ ಇದು ಬಿಜೆಪಿ ಷಡ್ಯಂತ್ರ ಎಂದು ಆರೋಪಿಸಿದೆ. ಈ ಮಧ್ಯೆ ಎಂಎಲ್ಸಿ ಗೋವಿಂದರಾಜ್ ವಿರುದ್ಧ ಎಫ್ಐಆರ್ ದಾಖಲಾಗುವವರೆಗೂ ಕ್ರಮ ಇಲ್ಲ ಎಂದು ಕೆಪಿಸಿಸಿ ಸ್ಪಷ್ಟಪಡಿಸಿದೆ.
ನವದೆಹಲಿ(ಫೆ.24): ಹೈಕಮಾಂಡ್'ಗೆ ಕಪ್ಪ ನೀಡಿರುವ ಡೈರಿಯ ಅಂಶಗಳು ಬಹಿರಂಗವಾಗಿದ್ದರೂ ಅದನ್ನು ಸುಲಭವಾಗಿ ಒಪ್ಪಿಕೊಳ್ಳಲು ಕಾಂಗ್ರೆಸ್ ಸಿದ್ಧವಿಲ್ಲ. ಬದಲಾಗಿ ಇದು ಬಿಜೆಪಿ ಷಡ್ಯಂತ್ರ ಎಂದು ಆರೋಪಿಸಿದೆ. ಈ ಮಧ್ಯೆ ಎಂಎಲ್ಸಿ ಗೋವಿಂದರಾಜ್ ವಿರುದ್ಧ ಎಫ್ಐಆರ್ ದಾಖಲಾಗುವವರೆಗೂ ಕ್ರಮ ಇಲ್ಲ ಎಂದು ಕೆಪಿಸಿಸಿ ಸ್ಪಷ್ಟಪಡಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಆರೋಪ ಮಾಡಿ ವಾರದ ಬಳಿಕ ಹೈಕಮಾಂಡ್ಗೆ ಕಪ್ಪ ನೀಡಲ್ಪಟ್ಟಿದ್ದು ಎಂದು ಹೇಳಲಾದ ಡೈರಿಯ ಅಂಶಗಳು ಬಹಿರಂಗವಾಗಿವೆ. ಆದರೆ ಈಗ ಇದನ್ನು ಅಷ್ಟು ಸುಲಭವಾಗಿ ಒಪ್ಪಲು ಸಿದ್ಧವಿಲ್ಲದ ರಾಜ್ಯ ಕಾಂಗ್ರೆಸ್ ಬಿಜೆಪಿ ವಿರುದ್ಧ ಆರೋಪ ಮಾಡಿದೆ. ಡೈರಿ ಬಿಡುಗಡೆ ಹಿಂದೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅರುಣ್ ಜೇಟ್ಲಿ, ಅನಂತಕುಮಾರ್ ಅವರ ಷಡ್ಯಂತ್ರ ಅಡಗಿದೆ ಎಂದು ಆರೋಪಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಇದರ ಹಿಂದೆ ಬಿಜೆಪಿ ವರಿಷ್ಠರ ನೇರ ಕೈವಾಡದ ಬಗ್ಗೆ ಆರೋಪ ಮಾಡಿದ್ದಾರೆ.
ಇನ್ನು ಡೈರಿ ಬರೆದಿರುವವರು ಎನ್ನಲಾಗಿರುವ ಕಾಂಗ್ರೆಸ್ ಎಂಎಲ್ ಸಿ ಹಾಗೂ ಸಿಎಂ ಸಂಸದೀಯ ಕಾರ್ಯದರ್ಶಿ ಗೋವಿಂದರಾಜ್ ವಿರುದ್ಧ ದೂರು ಅಥವಾ ಎಫ್ಐಆರ್ ದಾಖಲಾಗುವವರೆಗೂ ಕೆಪಿಸಿಸಿಯಿಂದ ಯಾವುದೇ ಕ್ರಮ ಜರುಗಿಸುವುದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.
ಒಟ್ಟಾರೆ, ಕೇವಲ ಆರೋಪಕ್ಕಷ್ಟೇ ಸೀಮಿತವಾಗಿ ಹೋಗುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದ್ದು, ಪ್ರಕರಣ ಮತ್ತೊಂದು ಮಗ್ಗಲು ಬದಲಾಯಿಸಿದೆ. ಹೀಗಾಗಿ ಇದು ಮತ್ತೆ ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಬೆಳವಣಿಗೆಗೆ ಕಾರಣವಾದರೂ ಅಚ್ಚರಿಯಿಲ್ಲ.