Narendra Modi Vs Rahul Gandhi: ಚುನಾವಣೆಯಲ್ಲಿ ಮೋದಿ ಚಾಲೆಂಜರ್ ಮಿಸ್ ಆಗಿದ್ದಾರೆ ಅಂತಾ ಅನ್ನಿಸ್ತಿರೋದೇಕೆ?
ಲೋಕಸಭೆ ಚುನಾವಣೆಯ ಮೂರು ಸುತ್ತು ಮುಕ್ತಾಯ ಕಂಡಿದೆ. ಇದರ ನಡುವೆ ಅತ್ಯಂತ ಮುಖ್ಯವಾಗಿ ಎದುರಾಗುತ್ತಿರುವ ಪ್ರಶ್ನೆ ಏನೆಂದರೆ, ಚುನಾವಣೆಯಲ್ಲಿ ಪ್ರಧಾನಿ ಮೋದಿ ಚಾಲೆಂಜರ್ ಅಂದರೆ ಎದುರಾಳಿ ಮಿಸ್ ಆಗಿದ್ದಾರೆ ಅನ್ನೋದು.
ಸಾರ್ವತ್ರಿಕ ಚುನಾವಣೆಯ ಕದನ ದಿನದಿಂದ ದಿನಕ್ಕೆ ಬಿರುಸು ಪಡೆದುಕೊಳ್ಳುತ್ತಿದೆ. ಈಗಾಗಲೇ ಮೂರು ಹಂತಗಳಲ್ಲಿ ಮತದಾನ ಪೂರ್ಣಗೊಂಡಿದ್ದು, ನಾಲ್ಕನೇ ಹಂತದ ಮತದಾನಕ್ಕೆ ಚುನಾವಣಾ ಆಯೋಗ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಆದರೆ, ಅರ್ಧಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಈಗಾಗಲೇ ಚುನಾವಣೆ ಮುಗಿದಿದೆ. ಈ ಬಾರಿಯ ಚುನಾವಣೆಯಲ್ಲಿ ಯಾರು ಅಧಿಕಾರ ಹಿಡಿಯುತ್ತಾರೆ? ಈ ಚುನಾವಣೆಯಲ್ಲಿ ಯಾವ ಪಕ್ಷ ಗೆಲ್ಲಲಿದೆ? ಯಾವ ಪಕ್ಷಕ್ಕೆ ಅಧಿಕಾರ ಸಿಗಲಿದೆ? ಎನ್ನುವುದು ಮುಖ್ಯ ಪ್ರಶ್ನೆಗಳಷ್ಟೇ. ಒಂದು ವಿಚಾರ ಏನೆಂದರೆ, ಬಹುತೇಕ ಎಲ್ಲ ಸಮೀಕ್ಷೆಗಳು ಬಿಜೆಪಿ (ಎನ್ಡಿಎ) ಮೈತ್ರಿಯತ್ತ ಅಧಿಕಾರ ಹಿಡಿಯಲಿವೆ ಎಂದಿದೆ.
ಬಿಜೆಪಿ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿಯಲಿದ್ದು, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹಲವು ಸಮೀಕ್ಷೆಗಳು ಮತ್ತು ರಾಜಕೀಯ ವಿಶ್ಲೇಷಕರು ಈಗಾಗಲೇ ಭವಿಷ್ಯ ನುಡಿದಿದ್ದಾರೆ. ಈ ನಡುವೆ ರಾಜಕೀಯ ವಿಶ್ಲೇಷಕ ಶ್ರಿನ್ (@ShrrinG) ಮಾಡಿರುವ ಟ್ವೀಟ್ ಒಂದು ಗಮನಸೆಳೆದಿದೆ. ಪ್ರಧಾನಿ ಮೋದಿ ಹಾಗೂ ಇಂಡಿಯಾ ಮೈತ್ರಿಯ ಪ್ರಮುಖ ನಾಯಕ ರಾಹುಲ್ ಗಾಂಧಿ ಅವರು ಲೋಕಸಭೆ ಚುನಾವಣೆಯಲ್ಲಿ ಅನುಸರಿಸುತ್ತಿರುವ ನೀತಿಗಳಿ, ಇಬ್ಬರೂ ನಾಯಕರು ಕೈಗೊಳ್ಳುತ್ತಿರುವ ಕಾರ್ಯಕ್ರಮಗಳು, ಸಮಾವೇಶಗಳು ಮತ್ತು ಬಹಿರಂಗ ಸಭೆಗಳ ಮಾಹಿತಿಯನ್ನು ತುಲನೆ ಮಾಡಿದ್ದಾರೆ.
ಅವರ ಎಕ್ಸ್ ಪೋಸ್ಟ್ನ ಪೂರ್ಣಪಾಠ ಇಲ್ಲಿದೆ.
ಈ ಬಾರಿಯ ಲೋಕಸಭೆ ಚುನಾವಣೆ ಒಂದೇ ನಿರೂಪಣೆಯೊಂದಿಗೆ ಪ್ರಾರಂಭವಾಯಿತು. ಅದೇನೆಂದರೆ, ಪಿಎಂ ಮೋದಿ ಅವರು ಮೂರನೇ ಬಾರಿಗೆ ಸರ್ಕಾರವನ್ನು ರಚಿಸುತ್ತಾರೆ, ಸತತ ಮೂರನೇ ಅವಧಿಗೆ ಅಧಿಕಾರ ವಹಿಸಿಕೊಳ್ಳುತ್ತಾರೆ ಎನ್ನುವುದು.ಬಿಜೆಪಿ ಮತ್ತು ಎನ್ಡಿಎ ಸ್ಥಾನಗಳ ಸಂಖ್ಯೆಯ ಬಗ್ಗೆ ಭವಿಷ್ಯ ನುಡಿದಿದೆ. ಭವಿಷ್ಯವಾಣಿಗಳು ಯಾರು ತಯಾರಿಸುತ್ತಿದ್ದಾರೆ ಎಂಬುದರ ಆಧಾರದ ಮೇಲೆ ಇದು ಬದಲಾಗುತ್ತಿದೆ. ಆದರೆ ಪ್ರತಿ ವಿಶ್ಲೇಷಕರು ಮೋದಿ 3.0 ನಮ್ಮ ಮುಂದಿದೆ ಎನ್ನುವುದು ಖಂಡಿತವಾಗಿ ಒಪ್ಪಿಕೊಂಡಿದ್ದಾರೆ. ಈಗ ನೀವು ವಿರೋಧ ಪಕ್ಷದವರಾಗಿದ್ದರೆ ಏನು ಮಾಡುತ್ತೀರಿ? ನೀವು ನಿರೂಪಣೆಯನ್ನು ಹೊಂದಿಸಲು, ಸುದ್ದಿ ಹರಿವನ್ನು ತಡೆಯಲು, ನಿಮ್ಮ ಆಲೋಚನೆಗಳನ್ನು ಹೊರತರಲು, ಜನರೊಂದಿಗೆ ಸಂವಹನ ಮಾಡಲು ಪ್ರಯತ್ನಿಸುತ್ತೀರಿ. ಇದು ನಿಜವಾಗಿಯೂ ಸಾಮಾನ್ಯವಾದ ಕ್ರಮ. ಆದರೆ, ಪ್ರಧಾನಿ ಮೋದಿ ಅವರ ಅತಿದೊಡ್ಡ ಚಾಲೆಂಜರ್ ಆಗಿರುವ ರಾಹುಲ್ ಗಾಂಧಿ ಈವರೆಗೂ ಮಾಡಿದ್ದೇನು ಅನ್ನೋದನ್ನು ನೋಡೋದಾರೆ, ಅವರು ಏನನ್ನೂ ಮಾಡಿಲ್ಲ ಅನ್ನೋದು.
ಪ್ರಧಾನಿ ಮೋದಿ ಪ್ರಚಾರ ಹೇಗಿತ್ತು?: ಹೌದು ಪ್ರಧಾನಿ ಮೋದಿ ಚುನಾವಣೆ ಘೋಷಣೆ ಮಾಡುವ ಮುನ್ನವೇ ಮಾರ್ಚ್ನಲ್ಲಿ 9 ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಅದರೊಂದಿಗೆ ಏಪ್ರಿಲ್ 28 ಹಾಗೂ ಮೇನಲ್ಲಿ ಈವರೆಗೂ 26 ಸಮಾವೇಶದಲ್ಲಿ ಭಾಗಿಯಾಗಿದ್ದಾರೆ. ತಮ್ಮ ನಿಬಿಡ ವೇಳಾಪಟ್ಟಿಯ ನಡುವೆಯೀ ಪ್ರಧಾನಿ ಮೋದಿ ಮಾರ್ಚ್ನಲ್ಲಿ 24 ಸಂದರ್ಶನಗಳನ್ನು ನೀಡಲು ಸಮಯ ಮೀಸಲಿಟ್ಟಿದ್ದಾರೆ. ಈ ಸಂದರ್ಶನಗಳು ಪ್ರಾದೇಶಿಕ (ತಂತಿ ಟಿವಿ, ಅಸ್ಸಾಂ ಟ್ರಿಬ್ಯೂನ್, ಏಷ್ಯಾನೆಟ್ ಗ್ರೂಪ್, ವಿಜಯವಾಣಿ, ನ್ಯೂಸ್ 18, ಸಕಲ್, ಈನಾಡು, ಕಚ್ ಮಿತ್ರ, ದಿವ್ಯ ಭಾಸ್ಕರ್, ಗುಜರಾತ್ ಸಮಾಚಾರ್, ಫುಲ್ಚಾಬ್, ಸಂದೇಶ್ ನ್ಯೂಸ್, ಆನಂದ್ ಬಜಾರ್ ಪತ್ರಿಕಾ), ರಾಷ್ಟ್ರೀಯ (ಹಿಂದೂಸ್ತಾನ್, ಹಿಂದೂಸ್ತಾನ್ ಟೈಮ್ಸ್, ANI, ದೈನಿಕ್ ಜಾಗರಣ್, ಟೈಮ್ಸ್ ಆಫ್ ಇಂಡಿಯಾ, ನ್ಯೂಸ್18, ಟೈಮ್ಸ್ ನೌ) ಮತ್ತು ಅಂತರಾಷ್ಟ್ರೀಯ (ನ್ಯೂಸ್ವೀಕ್) ಮಾಧ್ಯಮಗಳಿಗೆ ಸೇರಿವೆ. ಇದು ಕೂಡ ನಿಮಗೆ ವಿಶೇಷ ಅನಿಸೋದಿಲ್ಲವೆಂದರೆ, ಚುನಾವಣೆ ಘೋಷಣೆ ಮಾಡಿದ ಬಳಿಕ, ಮೋದಿ ಬರೋಬ್ಬರಿ 21 ರೋಡ್ ಶೋ ಮಾಡಿದ್ದಾರೆ. ಅದರೊಂದಿಗೆ ದೇವಾಲಯಗಳು ಮತ್ತು ಗುರುದ್ವಾರಗಳಿಗೆ ಲೆಕ್ಕವಿಲ್ಲದಷ್ಟು ಭೇಟಿಗಳು ಮತ್ತು ಪ್ರಸಿದ್ಧ ವ್ಯಕ್ತಿಗಳು ಮತ್ತು ಸಾಮಾನ್ಯ ನಾಗರಿಕರನ್ನು ಅವರು ಭೇಟಿಯಾಗಿದ್ದಾರೆ.
ರಾಹುಲ್ ಗಾಂಧಿ ಪ್ರಚಾರ ಹೇಗಿತ್ತು?: ರಾಹುಲ್ ಗಾಂಧಿ ಅವರ ನ್ಯಾಯ್ ಯಾತ್ರೆ ಮಾರ್ಚ್ 17 ರಂದು ಕೊನೆಗೊಂಡಿತ್ತು. ಮೇ 8ರವರೆಗೂ ರಾಹುಲ್ ಗಾಂಧಿ ಒಟ್ಟು 39 ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿದ್ದಾರೆ. ಮಾರ್ಚ್ನಲ್ಲಿ 1 ಸಮಾವೇಶದಲ್ಲಿ ಭಾಗಿಯಾಗಿದ್ದರೆ, ಏಪ್ರಿಲ್ನಲ್ಲಿ 29 ಹಾಗೂ ಮೇಯಲ್ಲಿ 10 ಸಮಾವೇಶಗಳನ್ನು ಒಳಗೊಂಡಿದೆ. ಈ ಸಭೆಗಳಲ್ಲಿ ಹೆಚ್ಚಿನವು ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಕಡಿಮೆ ಅಥವಾ ಇಲ್ಲದ ಸ್ಥಳಗಳಲ್ಲಿ ನಡೆದಿವೆ (ಉದಾಹರಣೆಗೆ ಭಿಂದ್, ಕೇಂದ್ರಪಾರಾ). ರಾಹುಲ್ ಗಾಂಧಿ ಇಲ್ಲಿಯವರೆಗೂ ಒಂದೇ ಒಂದು ಸಂದರ್ಶನದಲ್ಲಿ ಭಾಗಿಯಾಗಿಲ್ಲ. ನ್ಯಾಯ್ ಯಾತ್ರಾ ಹಾಗೂ ಇಂಡಿ ಮೈತ್ರಿ ವೇಳೆ ಕೆಲವು ಸೆಟ್ ಅಪ್ ಆದ ಸುದ್ದಿಗೋಷ್ಠಿಗಳು ನಡೆದಿದ್ದವು. ಅವರ ಐಟಿ ಸೆಲ್ನೊಂದಿಗೆ ಸಾಮಾಜಿಕ ಮಾಧ್ಯಮ ಪ್ರೊಜೆಕ್ಷನ್ಗಾಗಿ ಸಂವಾದಗಳು ನಡೆದಿವೆ, ಆದರೆ, ಯಾವುದೇ ಮಾಧ್ಯಮ ಸಂವಾದ ಅಥವಾ ಸಂದರ್ಶನಗಳನ್ನು ರಾಹುಲ್ ಗಾಂಧಿ ಮಾಡಿಲ್ಲ.
ಭಾರತ ಅಭಿವೃದ್ಧಿಗೆ ಪ್ರಧಾನಿ ಮೋದಿಯೇ ಕಾರಣ: ಅಮೆರಿಕ ಉದ್ಯಮಿ
ಅಂತಿಮವಾಗಿ ಹೇಳೋದೇನೆಂದರೆ, ಎರಡು ಬಾರಿ ಅಧಿಕಾರದಲ್ಲಿದ್ದ ನಾಯಕನ ವಿರುದ್ಧ ಸ್ಪರ್ಧೆ ಮಾಡುವ ವೇಳೆ, ಅವರಿಗಿಂತ ಅರ್ಧಕ್ಕೂ ಕಡಿಮೆ ಸಮಾವೇಶವನ್ನು ಎದುರಾಳಿಯಾಇರುವ ರಾಹುಲ್ ಗಾಂಧಿ ಮಾಡಿದ್ದಾರೆ. ಚುನಾವಣೆಯ ಅತ್ಯಂತ ಮಹತ್ವದ ಸಮಯದಲ್ಲಿ ಅವರು 24 ರಿಂದ 36 ಗಂಟೆಗಳ ಕಾಲ ಪ್ರಚಾರದಿಂದಲೇ ನಾಪತ್ತೆಯಾಗಿದ್ದರು. ರಾಹುಲ್ ಗಾಂಧಿಯವರ ಪ್ರಭಾವ ಚುನಾವಣಾ ಕಣದಲ್ಲಿ ಯಾಕೆ ಕಡಿಮೆ ಆಗುತ್ತಿದೆ. ರಾಹುಲ್ ಗಾಂಧಿ ಆಡುವ ಮಾತು ಪಕ್ಷಕ್ಕೆ ಹಾನಿಯಾಗುತ್ತದೆ ಎನ್ನುವ ಕಾರಣಕ್ಕಾಗಿಯೇ ಅವರ ಪ್ರಚಾರವನ್ನು ಲಿಮಿಟ್ ಮಾಡುತ್ತಿದೆಯೇ ಎನ್ನುವ ಅನುಮಾನ ಕಾಡಿದೆ. ಇದೆಲ್ಲದರ ನಡುವೆ ಈ ಚುನಾವಣೆಯಲ್ಲಿ ಚಾಲೆಂಜರ್ ಮಿಸ್ ಆಗಿದ್ದಾರೆ ಎನ್ನುವ ಪ್ರಶ್ನೆಯಂತೂ ನೇರಾನೇರವಾಗಿ ಕಾಣುತ್ತದೆ ಎಂದಿದ್ದಾರೆ.
ಸ್ನೇಹಿತರ ಬಗ್ಗೆಯೇ ಪ್ರಧಾನಿ ಮೋದಿ ಟೀಕೆ ಏಕೆ?: ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯ