ರಾಜತಾಂತ್ರಿಕ ಗೆಲುವು, ಇರಾನ್ ವಶಪಡಿಸಿದ ಹಡಗಿನಲ್ಲಿರುವ ಎಲ್ಲಾ ಭಾರತೀಯರ ಬಿಡುಗಡೆ ಒಪ್ಪಿಗೆ!
ಭಾರತಕ್ಕೆ ಅತೀ ದೊಡ್ಡ ರಾಜತಾಂತ್ರಿಕ ಗೆಲುವು ಸಿಕ್ಕಿದೆ. ಇರಾನ್ ವಶಪಡಿಕೊಂಡ ಹಡಗಿನಲ್ಲಿರುವ ಎಲ್ಲಾ ಭಾರತೀಯರನ್ನು ಇರಾನ್ ಬಿಡುಗಡೆ ಮಾಡಲು ಒಪ್ಪಿಕೊಂಡಿದೆ. ತವರಿಗೆ ಮರಳಲು ಭಾರತೀಯರು ಸ್ವತಂತ್ರರು ಎಂದು ಇರಾನ್ ಹೇಳಿದೆ.
ನವದೆಹಲಿ(ಏ.18) ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧ ಸಂಘರ್ಷದಿಂದ 17 ಭಾರತೀಯ ಸಿಬ್ಬಂದಿಗಳು ಸಂಕಷ್ಟಕ್ಕೆ ಸಿಲುಕಿದ್ದರು. ಇರಾನ್ ವಶಪಡಿಸಿಕೊಂಡ ಹಡಗಿನಲ್ಲಿದ್ದ 25 ಸಿಬ್ಬಂದಿಗಳ ಪೈಕಿ 17 ಭಾರತೀಯ ಸಿಬ್ಬಂದಿಗಳನ್ನು ಸುರಕ್ಷಿತವಾಗಿ ಬಿಡಿಸಿಕೊಳ್ಳುವಲ್ಲಿ ಭಾರತ ಯಶಸ್ವಿಯಾಗಿದೆ. ಇರಾನ್ ವಶದಲ್ಲಿರುವ 17 ಸಿಬ್ಬಂದಿಗಳ ಪೈಕಿ ಈಗಾಗಲೇ ಮಹಿಳಾ ಸಿಬ್ಬಂದಿ ಬಿಡುಗಡೆಯಾಗಿ ಭಾರತ ಸೇರಿಕೊಂಡಿದ್ದಾರೆ. ಇನ್ನುಳಿದ 16 ಸಿಬ್ಬಂದಿಗಳ ಬಿಡುಗಡೆಗೆ ಇರಾನ್ ಒಪ್ಪಿಗೆ ಸೂಚಿಸಿದೆ.
ಭಾರತದ ರಾಜತಾಂತ್ರಿಕ ಮಾತುಕತೆಗೆ ಇರಾನ್ ಶರಣಾಗಿದೆ. ಹಡಗಿನಲ್ಲಿರುವ ಭಾರತೀಯ ಸಿಬ್ಬಂದಿಗಳು ತವರಿಗೆ ಮರಳಲು ಸ್ವತಂತ್ರರು ಎಂದು ಇರಾನ್ ರಾಯಭಾರ ಕಚೇರಿ ಅಧಿಕಾರಿಗಳು ಟೈಮ್ಸ್ ನೌ ಖಾಸಗಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಹೊರಬೀಳುತ್ತಿದ್ದಂತೆ ಭಾರತದಲ್ಲಿ ಸಂಭ್ರಮ ಮನೆ ಮಾಡಿದೆ. ಸಂಕಷ್ಟಕ್ಕೆಸ ಸಿಲುಕಿದ್ದ ಕುಟುಂಬಗಳಲ್ಲಿ ಸಂಭ್ರಮ ಮನೆ ಮಾಡಿದೆ.
ಇರಾನ್ ಸೀಜ್ ಮಾಡಿದ ಹಡಗಿನಲ್ಲಿದ್ದ ಭಾರತೀಯ ಮಹಿಳಾ ಸಿಬ್ಬಂದಿ ತವರಿಗೆ ವಾಪಸ್!
ಇಸ್ರೇಲ್ ಮೇಲೆ ದಾಳಿ ನಡೆಸುತ್ತಿರವ ಇರಾನ್ ಈಗಾಗಲೇ ಇಸ್ರೇಲ್ ಮೂಲದ ಎಂಸಿಎಸ್ ಏರೀಸ್ ಹಡಗನ್ನು ವಶಪಡಿಸಿಕೊಂಡಿತ್ತು. ಏಪ್ರಿಲ್ 13ರಂದು ಇರಾನ್ ಸೇನೆ ದಾಳಿ ನಡೆಸಿತ್ತು. ದುಬೈ ವ್ಯಾಪ್ತಿಯ ಸಮುದ್ರದಲ್ಲಿ ಈ ಹಡಗನ್ನು ಇರಾನ್ ವಶಕ್ಕೆ ಪಡೆದಿತ್ತು. ಈ ಹಡಗಿನಲ್ಲಿದ್ದ ಒಟ್ಟು 25 ಸಿಬ್ಬಂದಿಗಳ ಪೈಕಿ 17 ಭಾರತೀಯ ಸಿಬ್ಬಂದಿಗಳು ಸಂಕಷ್ಟಕ್ಕೆ ಸಿಲುಕಿದ್ದರು.
ಈ ಮಾಹಿತಿ ಹೊರಬೀಳುತ್ತಿದ್ದಂತೆ ಭಾರತೀಯ ವಿದೇಶಾಂಗ ಇಲಾಖೆ ತಕ್ಷಣವೇ ಇರಾನ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿತ್ತು. ನಿರಂತರ ಮಾತುಕತೆ ಮೂಲಕ ಪರಿಹಾರ ಕಂಡುಕೊಂಡಿತ್ತು. ಇದರ ಪರಿಣಾಮವಾಗಿ ಇರಾನ್ ವಶದಲ್ಲಿರುವ ಭಾರತೀಯ ಸಿಬ್ಬಂದಿಗಳ ಭೇಟಿಗೆ ಇರಾನ್ ಅವಕಾಶ ನೀಡಿತ್ತು. ಇದೇ ವೇಳೆ ಭಾರತೀಯ ಅಧಿಕಾರಿಗಳು ಸಿಬ್ಬಂದಿಗಳ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು.
ಈ ಘಟನೆ ಬಳಿಕ ರಾಜತಾಂತ್ರಿಕ ಮಾತುಕತೆ ತೀವ್ರಗೊಳಿಸಿದ ಭಾರತ, ಮಹತ್ವದ ಗೆಲುವು ಸಾಧಿಸಿತ್ತು. ಹಡಗಿನಲ್ಲಿದ್ದ ಮಹಿಳಾ ಸಿಬ್ಬಂದಿ ಟೀಸಾ ಜೊಸೆಫ್ನ್ನು ಇರಾನ್ ಬಿಡುಗಡೆ ಮಾಡಿತ್ತು. ಇಂದು ತೀಸಾ ಜೊಸೆಫ್ ಕೇರಳಕ್ಕೆ ಮರಳಿದ್ದರು. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಮಹತ್ವದ ಗೆಲುವು ಸಿಕ್ಕಿದೆ. ಬಾಕಿ ಉಳಿದ 16 ಭಾರತೀಯ ಸಿಬ್ಬಂದಿಗಳ ಬಿಡುಗಡೆಗೆ ಇರಾನ್ ಒಪ್ಪಿಗೆ ಸೂಚಿಸಿದೆ. ಶೀಘ್ರದಲ್ಲೇ ಈ ಸಿಬ್ಬಂದಿಗಳು ಭಾರತಕ್ಕೆ ಮರಳಲಿದ್ದಾರೆ.
ಇಸ್ರೇಲ್ ಮೇಲೆ ಇರಾನ್ ಯುದ್ಧ ಸಾಧ್ಯತೆ, ಈ ದೇಶಕ್ಕೆ ಪ್ರಯಾಣ ಮಾಡದಂತೆ ಭಾರತೀರಿಗೆ MEA ಮನವಿ!
ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧ ಭೀತಿಯಿಂದ ಇದೀಗ ತೈಲ ಸಾಗಣೆ ಸಂಕಷ್ಟವೂ ಎದುರಾಗಿದೆ. ಈ ಕೊಲ್ಲಿಯ ಮೂಲಕ ಜಗತ್ತಿನ ಐದನೇ ಒಂದರಷ್ಟು ತೈಲ ಸಾಗಣೆ ನಡೆಯುವ ಕಾರಣ, ಇಲ್ಲಿ ಯುದ್ಧ ನಡೆದರೆ ಜಾಗತಿಕ ತೈಲ ಪೂರೈಕೆ ವ್ಯತ್ಯಯವಾಗುವ ಸಾಧ್ಯತೆಯಿದೆ.