ಮಾ.29, 31ಕ್ಕೆ ಸರ್ಕಾರಿ ರಜಾ ದಿನ, ಮಣಿಪುರ ವಿವಾದಕ್ಕೆ ಸ್ಪಷ್ಟನೆ ನೀಡಿದ ಬಿಜೆಪಿ ಸಂಸದ!
ಮಣಿಪುರದ ಬಿಜೆಪಿ ಸರ್ಕಾರ ಕ್ರಿಶ್ಚಿಯನ್ ಸಮುದಾಯದ ವಿರುದ್ಧ ನಿರ್ಣಯ ತೆಗೆದುಕೊಂಡಿದೆ ಅನ್ನೋ ವಿವಾದ ಭುಗಿಲೆದ್ದ ಬೆನಲ್ಲೇ ಬಿಜೆಪಿ ಸಂಸದ ಪ್ರಕಾಶ್ ಜಾವೇಡಕರ್ ಸ್ಪಷ್ಟನೆ ನೀಡಿದ್ದಾರೆ.
ಮಣಿಪುರ(ಮಾ.28) ಮಣಿಪುರದಲ್ಲಿ ಕ್ರಿಶ್ಚಿಯನ್ ಸಮುದಾಯದ ಗುಡ್ ಫ್ರೈಡೇ ಹಾಗೂ ಈಸ್ಟರ್ ಹಬ್ಬದ ರಜಾ ದಿನ ರದ್ದುಗೊಳಿಸಿ ಕೆಲಸ ಮಾಡುವಂತೆ ಸೂಚಿಸಲಾಗಿದೆ ಅನ್ನೋ ವಿವಾದ ಭಾರಿ ಸಂಚಲನ ಸೃಷ್ಟಿಸಿತ್ತು. ಕಾಂಗ್ರೆಸ್ ನಾಯಕರು ಮಣಿಪುರ ಸರ್ಕಾರ ಹಾಗೂ ಬಿಜೆಪಿ ವಿರುದ್ದ ಹರಿಹಾಯ್ದಿದ್ದರು. ಇತ್ತ ಸಾಮಾಜಿಕ ಮಾಧ್ಯಮದಲ್ಲೂ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಈ ವಿವಾದ ಜೋರಾಗುತ್ತಿದ್ದಂತೆ ಬಿಜೆಪಿ ಸಂಸದ ಪ್ರಕಾಶ್ ಜಾವೇಡಕರ್ ಸ್ಪಷ್ಟನೆ ನೀಡಿದ್ದಾರೆ. ಮಾರ್ಚ್ 29ರ ಗುಡ್ ಫ್ರೈಡೇ ಹಾಗೂ ಮಾರ್ಚ್ 31ರ ಈಸ್ಟರ್ ದಿನಕ್ಕೆ ರಜೆ ಘೋಷಿಸಲಾಗಿದೆ. ಈ ಕುರಿತು ಮಣಿಪುರ ಸರ್ಕಾರ ಅಧಿಸೂಚನೆ ಹೊರಡಿಸಿದೆ ಎಂದು ಜಾವಡೇಕರ್ ಹೇಳಿದ್ದಾರೆ.
ಪ್ರಕಾಶ್ ಜಾವೇಡಕರ್ ಈ ಕುರಿತು ಟ್ವೀಟ್ ಮಾಡಿ ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದ್ದಾರೆ. ಮಾರ್ಚ್ 29ರ ಗುಡ್ ಫ್ರೈಡೇ ಹಾಗೂ ಭಾನುವಾರ ಮಾರ್ಚ್ 31ರ ಈಸ್ಟರ್ ದಿನಕ್ಕೆ ರಜೆ ಎಂದು ಮಣಿಪುರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಆದರೆ ಕಾಂಗ್ರೆಸ್ಗೆ ಹೇಳಲು ಯಾವುದೇ ವಿಷಯವಿಲ್ಲ. ಹೀಗಾಗಿ ತಪ್ಪು ಮಾಹಿತಿಯನ್ನು ಜನರಿಗೆ ನೀಡುತ್ತಿದೆ. ಕಾಂಗ್ರೆಸ್ ಹಾಗೂ ಕಮ್ಯೂನಿಸ್ಟರ್ ಯಾವತ್ತು ಹಮಾಸ್ ಉಗ್ರರ ದಾಳಿ ಹಾಗೂ ರಷ್ಯಾ ಮೇಲಿನ ಉಗ್ರರ ದಾಳಿಯನ್ನು ಖಂಡಿಸುತ್ತದೆ ಎಂದು ಜಾವೇಡಕರ್ ಪ್ರಶ್ನಿಸಿದ್ದಾರೆ.
ಮೋದಿ, ಬಿಜೆಪಿ ಪಾಲಿಗೆ ಮಣಿಪುರ ಭಾರತದ ಭಾಗವಲ್ಲ: ರಾಹುಲ್ ಗಾಂಧಿ
ಮಣಿಪುರ ಸರ್ಕಾರ ಮಾರ್ಚ್ 30 ಹಾಗೂ 31ರಂದು ರಜೆ ಇಲ್ಲ, ಎಲ್ಲಾ ಸರ್ಕಾರಿ ಕಚೇರಿಗಳು ಕೆಲಸ ಮಾಡಬೇಕು. ಪ್ರಸಕ್ತ ಆರ್ಥಿಕ ವರ್ಷದ ಕೊನೆಯ ದಿನ ಕೆಲಸ ಕಡ್ಡಾಯವಾಗಿದೆ ಎಂದು ಅಧಿಸೂಚನೆ ಹೊರಡಿಲಾಗಿದೆ ಅನ್ನೋ ಆರೋಪ ಕೇಳಿಬಂದಿತ್ತು. ಕಾಂಗ್ರೆಸ್ ನಾಯಕ ಶಶಿ ತರೂರ್, ಮಣಿಪುರ ಬಿಜೆಪಿ ಸರ್ಕಾರದ ನಿರ್ಧಾರ ನಿಜಕ್ಕೂ ಆಘಾತ ತಂದಿದೆ. ಭಾರತದಲ್ಲಿ ಎಲ್ಲಾ ಧರ್ಮಗಳ ನಂಬಿಕೆಗೆ ಸಮಾನ ಗೌರವವಿದೆ. ಪ್ರತಿಯೊಬ್ಬರ ಆಚರಣೆಗಳನ್ನು ಗೌರವಿಸಲಾಗುತ್ತದೆ. ಆದರಲ್ಲೂ ಆಯಾ ಸಮುದಾಯದ ವಿಶೇಷ ದಿನಗಳು ಪವಿತ್ರ ದಿನವಾಗಿ ಆಚರಿಸಲಾಗುತ್ತದೆ. ಇದನ್ನು ಗೌರವಿಸಬೇಕು. ಆದರೆ ಈಗ ಹೊರಬಂದಿರುವ ನಿರ್ಧಾರಗಳು ಆತಂಕಕಾರಿ ಹಾಗೂ ಆಘಾತ ತರುತ್ತಿದೆ ಎಂದು ಶಶಿ ತರೂರ್ ಹೇಳಿದ್ದರು.
ಈಗಾಗಲೇ ಮಣಿಪುರದಲ್ಲಿ ಸಮುದಾಯದ ನಡುವಿನ ಹೋರಾಟದಲ್ಲಿ ಧಗಧಗಿಸಿದೆ. ಕುಕಿ ಹಾಗೂ ಮೈತೇಯಿ ಸಮುದಾಯ ನಡುವೆ ಹೊತ್ತಿಕೊಂಡ ಬೆಂಕಿ ಆರಲು ತಿಂಗಳಗಳೇ ಬೇಕಾಗಿತ್ತು. ಇದೀಗ ಮಣಿಪುರದಲ್ಲಿ ಬಿಜೆಪಿ ವಿವಾದದ ಕಿಡಿ ಹೊತ್ತಿಸುತ್ತಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಆರೋಪಗಳು, ಟೀಕೆಗಳು ಕೇಳಿಬಂದಿತ್ತು.
ಕಾಂಗ್ರೆಸ್ಗೆ ಡಬಲ್ ಶಾಕ್, ಮಿಲಿಂದ್ ಬೆನ್ನಲ್ಲೇ ಮತ್ತೊರ್ವ ಹಿರಿಯ ನಾಯಕ ರಾಜೀನಾಮೆ!
ಇಂಡಿಜಿನಿಯಸ್ ಟ್ರೈಬಲ್ ಲೀಡರ್ ಫೋರಮ್ ಸಂಘಟನೆ ಈ ಕುರಿತು ಎಚ್ಚರಿಕೆ ನೀಡಿದೆ. ಕ್ರಿಶ್ಚಿಯನ್ ಸಮುದಾಯದ ಭಾವನೆಗೆ ಧಕ್ಕೆ ತಂದಿದ್ದೀರಿ ಎಂದು ಹೇಳಿತ್ತು. ಈ ವಿವಾದ ಹೆಚ್ಚಾಗುತ್ತಿದ್ದಂತೆ ಇದೀಗ ಪ್ರಕಾಶ್ ಜಾವೇಡಕರ್ ಸ್ಪಷ್ಟನೆ ನೀಡಿದ್ದಾರೆ.