Asianet Suvarna News Asianet Suvarna News

ಪರೀಕ್ಷೆ ಹೀಗೆ ಎದುರಿಸಿ: ಮಕ್ಕಳಿಗೆ ಮೋದಿ ಪಾಠ; ಪ್ರಧಾನಿ ಟಾಪ್ 10 ಕಿವಿಮಾತು ಹೀಗಿದೆ..

ಮಕ್ಕಳು ಚೆನ್ನಾಗಿ ಓದುವ ಬುದ್ಧಿವಂತ ಮಕ್ಕಳ ಜೊತೆಗೇ ಗೆಳೆತನ ಮಾಡಬೇಕು. ಓದಿನ ಹಾಗೂ ಪರೀಕ್ಷೆಯ ಒತ್ತಡ ತಮ್ಮನ್ನು ಕುಗ್ಗಿಸದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

pariksha pe charcha compete with yourself not others pm modi tells students ash
Author
First Published Jan 30, 2024, 9:08 AM IST

ನವದೆಹಲಿ (ಜನವರಿ 30, 2024): ಸ್ಪರ್ಧಾತ್ಮಕ ಬದುಕಿನಲ್ಲಿ ಒತ್ತಡ ಎದುರಿಸುವ ಸಾಮರ್ಥ್ಯವನ್ನು ಮಕ್ಕಳಲ್ಲಿ ಪೋಷಕರು ಹಾಗೂ ಶಿಕ್ಷಕರು ಸೇರಿ ಬೆಳೆಸಬೇಕು ಎಂದಿರುವ ಪ್ರಧಾನಿ ನರೇಂದ್ರ ಮೋದಿ, ವಿದ್ಯಾರ್ಥಿಗಳ ಸವಾಲನ್ನು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ಒಟ್ಟಾಗಿ ಎದುರಿಸಬೇಕು ಎಂದು ಸಲಹೆ ನೀಡಿದ್ದಾರೆ.

ಏಳನೇ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದ ಅವರು, ಪೋಷಕರು ಮಕ್ಕಳ ಮಾರ್ಕ್ಸ್‌ ಕಾರ್ಡನ್ನು ತಮ್ಮ ವಿಸಿಟಿಂಗ್‌ ಕಾರ್ಡ್‌ ರೀತಿ ಬಳಸಬಾರದು. ಹಾಗೆಯೇ, ಮಕ್ಕಳು ಬೇರೆಯವರ ಜೊತೆಗೆ ಸ್ಪರ್ಧಿಸುವುದನ್ನು ಬಿಟ್ಟು ತಮ್ಮ ಜೊತೆಗೇ ತಾವು ಸ್ಪರ್ಧಿಸಬೇಕು ಎಂದು ಕಿವಿಮಾತು ಹೇಳಿದರು.

Pariksha Pe Charcha 2024: 'ಮಕ್ಕಳ ರಿಪೋರ್ಟ್‌ ಕಾರ್ಡ್‌, ನಿಮ್ಮ ವಿಸಿಟಿಂಗ್ ಕಾರ್ಡ್‌ ಅಲ್ಲ..' ಪೋಷಕರಿಗೆ ಮೋದಿ ಕಿವಿಮಾತು!

ಒತ್ತಡ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅನಿವಾರ್ಯ. ಯಾವುದೇ ರೀತಿಯ ಒತ್ತಡ ಎದುರಿಸಲು ಮಕ್ಕಳು ಸನ್ನದ್ಧರಾಗಬೇಕು. ಆ ಗುಣವನ್ನು ಪೋಷಕರು ಹಾಗೂ ಶಿಕ್ಷಕರು ಸೇರಿ ಅವರಲ್ಲಿ ಬೆಳೆಸಬೇಕು. ಸ್ಪರ್ಧೆಯು ನಮಗೆ ಸ್ಫೂರ್ತಿಯಾಗಬೇಕು. ಸ್ಪರ್ಧೆ ಆರೋಗ್ಯಕರವಾಗಿರಬೇಕು. ಹೀಗಾಗಿ ಮಕ್ಕಳು ಚೆನ್ನಾಗಿ ಓದುವ ಬುದ್ಧಿವಂತ ಮಕ್ಕಳ ಜೊತೆಗೇ ಗೆಳೆತನ ಮಾಡಬೇಕು. ಓದಿನ ಹಾಗೂ ಪರೀಕ್ಷೆಯ ಒತ್ತಡ ತಮ್ಮನ್ನು ಕುಗ್ಗಿಸದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಮಕ್ಕಳ ಮೇಲೆ ಒತ್ತಡ ಹಾಕಬೇಡಿ:
ತಮ್ಮ ಬದುಕಿನಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗದ ಪೋಷಕರು ಮಕ್ಕಳ ಮೇಲೆ ಹೆಚ್ಚು ಒತ್ತಡ ಹಾಕುತ್ತಾರೆ. ಬೇರೆ ಮಕ್ಕಳ ಜೊತೆಗೆ ಹೋಲಿಸಿ ತಮ್ಮ ಮಕ್ಕಳನ್ನು ಹಂಗಿಸುತ್ತಾರೆ. ಇದು ತಪ್ಪು. ಯಾರಾದರೂ ಸಿಕ್ಕಾಗ ತಮ್ಮ ಬಗ್ಗೆ ಮಾತಾಡುವುದನ್ನು ಬಿಟ್ಟು ಮಕ್ಕಳ ಸಾಧನೆಯ ಬಗ್ಗೆ ಹೇಳುತ್ತಾರೆ. ಆದರೆ, ಪೋಷಕರು ಹೀಗೆ ಮಕ್ಕಳ ಮಾರ್ಕ್ಸ್‌ ಕಾರ್ಡನ್ನು ತಮ್ಮ ವಿಸಿಟಿಂಗ್‌ ಕಾರ್ಡ್‌ ರೀತಿ ಬಳಸಬಾರದು ಎಂದು ಮೋದಿ ಸಲಹೆ ನೀಡಿದರು.

ಗಲಾಟೆ ಸಂಸದರಿಗೆ ಮೋದಿ ಚಾಟಿ: ನಿಯಮ ಉಲ್ಲಂಘಿಸುವ ಸಂಸದರಿಗೆ ಬೆಂಬಲ ಸರಿಯೇ? ವಿಪಕ್ಷಗಳಿಗೆ ಟಾಂಗ್

ಶಿಕ್ಷಕರು - ಮಕ್ಕಳ ಮಧ್ಯೆ ಬಾಂಧವ್ಯ:
ಶಿಕ್ಷಕರು ವಿದ್ಯಾರ್ಥಿಗಳ ಜೊತೆಗೆ ಸಿಲೆಬಸ್‌ಗೂ ಮೀರಿದ ಬಾಂಧವ್ಯವನ್ನು ಬೆಳೆಸಿಕೊಳ್ಳಬೇಕು. ಮಕ್ಕಳು ತಮಗೆ ಎದುರಾಗುವ ಸಣ್ಣಪುಟ್ಟ ಸಮಸ್ಯೆಗಳನ್ನು ಶಿಕ್ಷಕರ ಬಳಿ ಹೇಳಿಕೊಳ್ಳುವಂತಿರಬೇಕು. ಇಂದಿನ ಮೊಬೈಲ್‌ ಯುಗದಲ್ಲಿ ಮಕ್ಕಳಿಗೆ ಬರೆಯುವ ಅಭ್ಯಾಸವೇ ಇಲ್ಲದಂತಾಗುತ್ತಿದೆ. ವಿದ್ಯಾರ್ಥಿಗಳು ಕನಿಷ್ಠ ಪಕ್ಷ ತಮ್ಮ ಶೇ. 50 ರಷ್ಟು ಸಮಯವನ್ನು ಬರೆಯುವುದಕ್ಕೆ ಮೀಸಲಿಡುವಂತೆ ಶಿಕ್ಷಕರು ನೋಡಿಕೊಳ್ಳಬೇಕು ಎಂದು ಮೋದಿ ಹೇಳಿದರು.

ಶಿಕ್ಷಣ ಇಲಾಖೆಯು ಈ ಬಾರಿಯ ಪರೀಕ್ಷಾ ಪೇ ಚರ್ಚಾವನ್ನು ಭಾರತ ಮಂಟಪಮ್‌ನಲ್ಲಿ ಆಯೋಜಿಸಿತ್ತು. 2.26 ಕೋಟಿ ಮಕ್ಕಳು, ಪೋಷಕರು ಹಾಗೂ ಶಿಕ್ಷಕರು ನೋಂದಣಿ ಮಾಡಿಕೊಂಡು ಆನ್‌ಲೈನ್‌ ಮೂಲಕ ಭಾಗವಹಿಸಿದ್ದರು.

ಇದು ನನಗೂ ಪರೀಕ್ಷೆ ಇದ್ದ ಹಾಗೆ: ಮೋದಿ
ಪರೀಕ್ಷಾ ಪೇ ಚರ್ಚಾ ಎಂಬುದು ನನಗೂ ಪರೀಕ್ಷೆಯಿದ್ದ ಹಾಗೆ. ವಿದ್ಯಾರ್ಥಿಗಳು ಇಂದು ಹಿಂದೆಂದಿಗಿಂತ ಹೆಚ್ಚು ಸೃಜನಶೀಲರಾಗಿದ್ದಾರೆ. ಈ ವಿದ್ಯಾರ್ಥಿಗಳೇ ನಮ್ಮ ಭವಿಷ್ಯವನ್ನು ರೂಪಿಸಲಿದ್ದಾರೆ. ಅವರೊಂದಿಗೆ ಸಂವಾದ ನಡೆಸುವುದು ನನ್ನನ್ನು ನಾನೇ ಪರೀಕ್ಷೆಗೆ ಒಡ್ಡಿಕೊಂಡಂತೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನನಗೆ 30 ಸೆಕೆಂಡ್‌ನಲ್ಲಿ ನಿದ್ದೆ ಬರುತ್ತದೆ: ಮೋದಿ
ಆರೋಗ್ಯಕರ ಜೀವನಶೈಲಿ ಬೆಳೆಸಿಕೊಂಡರೆ ಓದು ಚೆನ್ನಾಗಿ ತಲೆಗೆ ಹತ್ತುತ್ತದೆ. ಸೂರ್ಯನ ಬೆಳಕಿನಲ್ಲಿ ಸಮಯ ಕಳೆಯುವುದು ಹಾಗೂ ಚೆನ್ನಾಗಿ ನಿದ್ದೆ ಮಾಡುವುದು ಬಹಳ ಮುಖ್ಯ. ಎಷ್ಟೇ ಒತ್ತಡವಿದ್ದರೂ ಅದನ್ನು ನಿಭಾಯಿಸಿಕೊಂಡು ಚೆನ್ನಾಗಿ ನಿದ್ದೆ ಮಾಡಬೇಕು. ನನಗಂತೂ ಮಲಗಿದ 30 ಸೆಕೆಂಡ್‌ನಲ್ಲಿ ನಿದ್ದೆ ಬಂದುಬಿಡುತ್ತದೆ. ಮಲಗಿದಾಗ ಚೆನ್ನಾಗಿ ನಿದ್ದೆ ಮಾಡುತ್ತೇನೆ. ಎದ್ದಾಗ ಸಂಪೂರ್ಣ ಎಚ್ಚರವಿರುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಊಟ, ತಿಂಡಿ ವೇಳೆ ಮೊಬೈಲ್‌ ಬೇಡ; ಮನೆಯಲ್ಲಿ ಎಲ್ಲರೂ ಫೋನ್‌ ಪಾಸ್ವರ್ಡ್‌ ಹಂಚಿಕೊಳ್ಳಿ: ಮೋದಿ
ನವದೆಹಲಿ: ಮನೆಯಲ್ಲಿ ಎಲ್ಲರೂ ತಮ್ಮ ಮೊಬೈಲ್‌ ಫೋನ್‌ಗಳ ಪಾಸ್ವರ್ಡ್‌ಗಳನ್ನು ಎಲ್ಲರ ಜೊತೆಗೂ ಹಂಚಿಕೊಳ್ಳಬೇಕು. ಇದರಿಂದ ನಮ್ಮ ವೈಯಕ್ತಿಕ ಬದುಕಿನಲ್ಲಿ ಪಾರದರ್ಶಕತೆ ಬರುತ್ತದೆ. ಜೊತೆಗೆ ಪರಸ್ಪರರ ನಡುವೆ ಬಾಂಧವ್ಯ ಹೆಚ್ಚಾಗಿ, ಅನುಮಾನಗಳು ದೂರವಾಗುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.

ಪರೀಕ್ಷಾ ಪೇ ಚರ್ಚಾದಲ್ಲಿ ಮಾತನಾಡಿದ ಅವರು, ಪೋಷಕರು ಮನೆಯಲ್ಲಿ ಮೊಬೈಲ್‌ ಫೋನ್‌ನಂತಹ ಗ್ಯಾಜೆಟ್‌ ಬಳಸುವುದಕ್ಕೆ ಕೆಲ ನಿಯಮಗಳನ್ನು ವಿಧಿಸಬೇಕು. ಊಟ, ತಿಂಡಿ ಮಾಡುವಾಗ ಯಾವುದೇ ಕಾರಣಕ್ಕೂ ಮೊಬೈಲ್‌ ಬಳಸಬಾರದು. ತಂತ್ರಜ್ಞಾನದ ಲಾಭವನ್ನು ಎಲ್ಲರೂ ಪಡೆಯಬೇಕು, ಆದರೆ ತಂತ್ರಜ್ಞಾನ ನಮ್ಮ ಬದುಕಿಗೆ ಹೊರೆಯಾಗಬಾರದು. ಅತಿಯಾದರೆ ಎಲ್ಲವೂ ವಿಷವಾಗುತ್ತದೆ ಎಂದು ತಿಳಿಸಿದರು.

ಮನೆಯಲ್ಲಿ ‘ನೋ ಗ್ಯಾಜೆಟ್‌ ಜೋನ್‌’ ನಿಗದಿಪಡಿಸಬೇಕು. ಅಲ್ಲಿ ಮೊಬೈಲ್‌ ಬಳಸಬಾರದು. ಉದಾಹರಣೆಗೆ, ಊಟ, ತಿಂಡಿ ಮಾಡುವ ಜಾಗದಲ್ಲಿ ಮೊಬೈಲ್‌ ಬಳಸಲೇಬಾರದು. ಇದೇ ವೇಳೆ, ಮಕ್ಕಳು ತಮ್ಮ ಪೋಷಕರಿಗೆ ತಂತ್ರಜ್ಞಾನ ಬಳಸುವುದನ್ನು ಹೇಳಿಕೊಡಬೇಕು ಎಂದು ಕಿವಿಮಾತು ಹೇಳಿದರು.

‘ಅತಿ’ಗಳನ್ನು ಬಿಡಿ:
ಸಮತೋಲಿತ ಜೀವನಶೈಲಿ ರೂಢಿಸಿಕೊಳ್ಳಲು ‘ಎಲ್ಲಾ ಅತಿಗಳನ್ನೂ’ ಬಿಡಬೇಕು. ಅತಿಯಾಗಿ ಮೊಬೈಲ್‌ ಬಳಸುವುದನ್ನು ಮಕ್ಕಳು ಬಿಡಬೇಕು. ಮಲಗುವುದಕ್ಕೆ ಮುಂಚೆ ಮೊಬೈಲ್‌ನಲ್ಲಿ ರೀಲ್ಸ್‌ ನೋಡುತ್ತಾ ಇರಬೇಡಿ. ಅದು ನಿದ್ದೆಯನ್ನು ಹಾಳುಮಾಡುತ್ತದೆ. ಹೇಗೆ ಮೊಬೈಲ್‌ ಫೋನ್‌ ಕೆಲಸ ಮಾಡುವುದಕ್ಕೆ ರೀಚಾರ್ಜ್‌ ಮಾಡಬೇಕೋ ಹಾಗೆಯೇ ನಮ್ಮ ದೇಹ ಸರಿಯಾಗಿ ಕೆಲಸ ಮಾಡುವುದಕ್ಕೂ ಅದನ್ನು ರೀಚಾರ್ಜ್‌ ಮಾಡಬೇಕಾಗುತ್ತದೆ. ದೇಹಕ್ಕೆ ವಿಶ್ರಾಂತಿ ನೀಡುವುದೇ ಅದನ್ನು ರೀಚಾರ್ಜ್‌ ಮಾಡುವುದಕ್ಕಿರುವ ಏಕೈಕ ಮಾರ್ಗ ಎಂದು ಪ್ರಧಾನಿ ಮೋದಿ ತಿಳಿಸಿದರು.

ಮೋದಿ ಟಾಪ್ 10 ಕಿವಿಮಾತು

  • ಸ್ಪರ್ಧೆಯು ಆರೋಗ್ಯಕರವಾಗಿರಬೇಕು. ನಿಮ್ಮ ಕೈಲಾದದ್ದನ್ನು ಮಾಡುವತ್ತ ಗಮನಹರಿಸಿ, ನಿಮ್ಮ ಗೆಳೆಯರೊಂದಿಗೆ ಸ್ಪರ್ಧಿಸಬೇಡಿ. ನಿಮ್ಮ ಗೆಳೆಯರ ಯಶಸ್ಸನ್ನು ಸ್ಫೂರ್ತಿಯ ಮೂಲವಾಗಿ ಬಳಸಿ.
  • ನಿಮ್ಮ ಮನಸ್ಸು ಕೂಡ ಆರೋಗ್ಯಕರವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಆರೋಗ್ಯಕರ ದೇಹ ಹೊಂದಿರುವುದು ಮುಖ್ಯ
  • ಶಿಕ್ಷಕರು ತಮ್ಮ ಕೆಲಸವನ್ನು ಕೇವಲ ಕೆಲಸ ಎಂದು ಪರಿಗಣಿಸದೆ ವಿದ್ಯಾರ್ಥಿಗಳ ಜೀವನವನ್ನು ಸಬಲೀಕರಣಗೊಳಿಸುವ ಸಾಧನವಾಗಿ ತೆಗೆದುಕೊಳ್ಳಬೇಕು.
  • ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಿನ ಸಂಬಂಧವನ್ನು ಮೊದಲ ದಿನದಿಂದಲೇ ಬೆಸೆಯಬೇಕು. ಇದು ಯಶ ಕಂಡರೆ ಪರೀಕ್ಷೆಯ ದಿನವು ಒತ್ತಡದಿಂದ ಕೂಡಿರುವುದಿಲ್ಲ.
  • ಶಿಕ್ಷಕರು ತಮ್ಮ ಎಲ್ಲಾ ವಿದ್ಯಾರ್ಥಿಗಳನ್ನು ಸಮಾನವಾಗಿ ಕಾಣಬೇಕು.
  • ಮಕ್ಕಳು ತಯಾರಿಕೆಯ ಸಮಯದಲ್ಲಿ ಸಣ್ಣ ಗುರಿಗಳನ್ನು ಹೊಂದಿಸಬೇಕು ಮತ್ತು ಕ್ರಮೇಣ ಕಾರ್ಯಕ್ಷಮತೆಯನ್ನು ಸುಧಾರಿಸಬೇಕು. ಈ ರೀತಿಯಾಗಿ ನೀವು ಪರೀಕ್ಷೆಗಳಿಗೆ ಸಂಪೂರ್ಣವಾಗಿ ಸಿದ್ಧರಾಗುತ್ತೀರಿ
  • ಎಲ್ಲ ರೀತಿಯ ಒತ್ತಡಗಳನ್ನು ಎದುರಿಸುವ ಸಾಮರ್ಥ್ಯ ಹೊಂದಿರಬೇಕು.
  •  ‘ಒಳ್ಳೇ ದಿನ ಬರುತ್ತದೆ’ ಎಂದು ಆ ದಿನಕ್ಕೆ ಕಾಯಬಾರದು. ನಾವೇ ಒಳ್ಳೇ ದಿನ ಸಿದ್ಧಪಡಿಸಿಕೊಳ್ಳಬೇಕು.
  • ಪೋಷಕರು ಇತರರ ಜತೆ ಹೋಲಿಕೆಗಳ ಮೂಲಕ ಮಕ್ಕಳ ನೈತಿಕತೆ ಮತ್ತು ಆತ್ಮವಿಶ್ವಾಸವನ್ನು ಕುಂದಿಸಬಾರದು. ಸರಿಯಾದ ಸಂಭಾಷಣೆಯ ಮೂಲಕ ಸಮಸ್ಯೆ ಬಗೆಹರಿಸಬೇಕು.
  •  ಪೋಷಕರು ತಮ್ಮ ಮಗುವಿನ ರಿಪೋರ್ಟ್ ಕಾರ್ಡ್ ಅನ್ನು ತಮ್ಮ ಸ್ವಂತ ವಿಸಿಟಿಂಗ್ ಕಾರ್ಡ್ ಎಂದು ಪರಿಗಣಿಸಬಾರದು.
Follow Us:
Download App:
  • android
  • ios