ಅನಾವರಣಗೊಳ್ಳಲು ಸಿದ್ಧವಾಗಿದೆ ಗಂಗೂಲಿ ಕಂಚಿನ ಪ್ರತಿಮೆ
"ಕಳೆದ ಎಂಟು-ಹತ್ತು ವರ್ಷಗಳಲ್ಲಿ ಉಭಯ ತಂಡಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಪಾಕಿಸ್ತಾನಕ್ಕೆ ಹೋಲಿಸಿದರೆ ಟೀಂ ಇಂಡಿಯಾ ಎಲ್ಲಾ ಕ್ಷೇತ್ರಗಳಲ್ಲೂ ಸಾಕಷ್ಟು ಬಲಿಷ್ಟವಾಗಿದೆ"
ಕೋಲ್ಕತಾ(ಮೇ.21): ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಕ್ರಿಕೆಟ್'ಗೆ ಸಲ್ಲಿಸಿರುವ ಕೊಡುಗೆಯನ್ನು ಪರಿಗಣಿಸಿ, ಕ್ರೀಡಾಂಗಣದಲ್ಲಿ ಅವರ ಕಂಚಿನ ಪ್ರತಿಮೆ ಸ್ಥಾಪನೆಗೆ ಪಶ್ಚಿಮ ಬಂಗಾಳದ ದಕ್ಷಿಣ ದಿನಜ್ಪುರ ಜಿಲ್ಲಾ ಕ್ರೀಡಾ ಸಂಸ್ಥೆ ಮುಂದಾಗಿದೆ.
ಸುಮಾರು 8 ಅಡಿ ಉದ್ದದ ಸೌರವ್ ಗಂಗೂಲಿ ಪ್ರತಿಮೆ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ದಿನಜ್'ಪುರ ಜಿಲ್ಲೆಯ ಬಾಲೂರ್'ಘಾಟ್ ಕ್ರೀಡಾಂಗಣದಲ್ಲಿ ಮೂರ್ತಿ ಪ್ರತಿಷ್ಠಾಪನೆಗೊಳ್ಳಲಿದೆ.
ಸದ್ಯ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ವೀಕ್ಷಣೆ ವಿವರಣೆ ನೀಡಲು ಗಂಗೂಲಿ ಇಂಗ್ಲೆಂಡ್'ಗೆ ತೆರಳಲಿದ್ದು, ಅಲ್ಲಿಂದ ಹಿಂದಿರುಗಿದ ಬಳಿಕ ಅವರೇ ಸ್ವತಃ ಆಗಮಿಸಿ ತಮ್ಮ ಪತ್ರಿಮೆ ಅನಾವರಣಗೊಳಿಸಲಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
ಭಾರತ ಹಾಗೂ ಪಾಕಿಸ್ತಾನ ತಂಡಗಳು ಮೊದಲ ಪಂದ್ಯದಲ್ಲೇ ಮುಖಾಮುಖಿಯಾಗುತ್ತಿರುವ ಕುರಿತಂತೆ ಪ್ರತಿಕ್ರಿಯಿಸಿರುವ ಸೌರವ್, "ಕಳೆದ ಎಂಟು-ಹತ್ತು ವರ್ಷಗಳಲ್ಲಿ ಉಭಯ ತಂಡಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಪಾಕಿಸ್ತಾನಕ್ಕೆ ಹೋಲಿಸಿದರೆ ಟೀಂ ಇಂಡಿಯಾ ಎಲ್ಲಾ ಕ್ಷೇತ್ರಗಳಲ್ಲೂ ಸಾಕಷ್ಟು ಬಲಿಷ್ಟವಾಗಿದೆ" ಎಂದಿದ್ದಾರೆ.