ಅತ್ಯಾಚಾರ ಪ್ರಕರಣ: ಸರ್ದಾರ್ ಸಿಂಗ್ ದಿಢೀರ್ ವಿಚಾರಣೆ
ಕಳೆದ ವರ್ಷ ಲಂಡನ್'ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಗೆ ಈ ಕಾರಣದಿಂದಾಗಿಯೇ ಸರ್ದಾರ್ ಅವರನ್ನು ತಂಡದಿಂದ ಕೈಬಿಡಲಾಗಿತ್ತು.
ಲಂಡನ್(ಜೂ.20): ವಿಶ್ವ ಹಾಕಿ ಲೀಗ್ ಸೆಮಿಫೈನಲ್ ಪಂದ್ಯಾವಳಿಯಲ್ಲಿ ಪಾಕಿಸ್ತಾನವನ್ನು ಮಣಿಸಿ ಸಂಭ್ರಮದಲ್ಲಿದ್ದ ಭಾರತ ಹಾಕಿ ತಂಡದ ಮಾಜಿ ನಾಯಕ ಸರ್ದಾರ್ ಸಿಂಗ್'ಗೆ ಹೊಸ ಸಮಸ್ಯೆಯೊಂದು ಎದುರಾಗಿದೆ.
ಕಳೆದ ವರ್ಷ ಅಶ್ಪಾಲ್ ಭೋಗಲ್ ಎನ್ನುವಾಕೆ, ತಾನು ಸರ್ದಾರ್ ಸಿಂಗ್ ಪ್ರೇಯಸಿ ಎಂದು ಹೇಳಿಕೊಂಡು, ಜೂನ್ 2015ರಲ್ಲಿ ಭಾರತದ ಮಾಜಿ ನಾಯಕ ಸರ್ದಾರ್ ಸಿಂಗ್ ತಮ್ಮ ಮೇಲೆ ಅತ್ಯಾಚಾರ ಮಾಡಿದ್ದಾಗಿ ಆರೋಪಿಸಿದ್ದರು. ಈ ಸಂಬಂಧ ಭಾರತ ಹಾಗೂ ಇಂಗ್ಲೆಂಡ್ ಎರಡೂ ದೇಶಗಳಲ್ಲಿ ಪ್ರಕರಣ ದಾಖಲಾಗಿತ್ತು.
ಇದೀಗ, ಇದಕ್ಕಿದಂತೆ ಮುನ್ಸೂಚನೆ ನೀಡದೇ ಪಂದ್ಯಾವಳಿ ವೇಳೆ ಯಾರ್ಕ್'ಶೈರ್ ಪೊಲೀಸರು ಸರ್ದಾರ್ ಅವರನ್ನು ವಿಚಾರಣೆ ನಡೆಸಿದ್ದಾರೆ. ಈ ಕುರಿತು ಹಾಕಿ ಇಂಡಿಯಾ ಅಧ್ಯಕ್ಷ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹತ್ವದ ಪಂದ್ಯಕ್ಕೂ ಮುನ್ನ ತಳಮಳ ಉಂಟು ಮಾಡುವ ತಂತ್ರವಿದು ಎಂದು ದೂಷಿಸಿದ್ದಾರೆ. ಕಳೆದ ವರ್ಷ ಲಂಡನ್'ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಗೆ ಈ ಕಾರಣದಿಂದಾಗಿಯೇ ಸರ್ದಾರ್ ಅವರನ್ನು ತಂಡದಿಂದ ಕೈಬಿಡಲಾಗಿತ್ತು.