ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಕೊಲೆಗೆ ಟ್ವಿಸ್ಟ್; ಕಾಲೇಜು ಹುಡುಗಿಗೋಸ್ಕರ ಸಹಪಾಠಿಯನ್ನೇ ಕೊಂದ ಶಾಲಾ ಮಕ್ಕಳು
* ಯಲಹಂಕದ ಸರ್ಕಾರಿ ಹೈಸ್ಕೂಲ್ನಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಹರ್ಷರಾಜ್
* ಈತನಿಗೆ ಪಿಯು ವಿದ್ಯಾರ್ಥಿನಿಯೊಬ್ಬಳ ಜತೆ ಸ್ನೇಹ. ಈ ಬಗ್ಗೆ ಗೆಳೆಯರಿಗೆ ಅಸಮಾಧಾನವಿದ್ದ ಬಗ್ಗೆ ವದಂತಿ
* ಸೋಮವಾರ ಶಾಲಾ ವಾರ್ಷಿಕೋತ್ಸವ ಮುಗಿಸಿ ಹೋಗುವಾಗ ಶಾಲೆಯಿಂದ 100 ಮೀ. ದೂರದಲ್ಲಿ ಗಲಾಟೆ
* ಮಾತಿಗೆ ಮಾತು ಬೆಳೆದು ಹರ್ಷರಾಜ್ಗೆ ಚಾಕುವಿನಿಂದ ಇರಿದ ಸಹಪಾಠಿಗಳು, ಬಳಿಕ ಆಸ್ಪತ್ರೆಗೆ ದಾಖಲಿಸಿ ಪರಾರಿ
* ಗಲಾಟೆ ವೇಳೆ ತಮಗೆ ಆದ ಗಾಯಕ್ಕೆ ಚಿಕಿತ್ಸೆ ಪಡೆಯಲು ಅದೇ ಆಸ್ಪತ್ರೆಗೆ ಬಂದಾಗ ಪೊಲೀಸ್ ಬಲೆಗೆ
ಬೆಂಗಳೂರು(ಫೆ. 28): ಕ್ಷುಲ್ಲಕ ಕಾರಣಕ್ಕಾಗಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಸೇರಿ ಇನ್ನೊಬ್ಬ ವಿದ್ಯಾರ್ಥಿಯನ್ನು ಚೂರಿ ಇರಿದು ಕೊಂದಿರುವ ಭೀಕರ ಘಟನೆ ರಾಜಧಾನಿಯಲ್ಲಿ ನಡೆದಿದೆ. ಘಟನೆಗೆ ತಮ್ಮ ಹಿರಿಯ ವಿದ್ಯಾರ್ಥಿನಿ ಜತೆ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಬಯಸಿದ್ದ ‘ವಿಶೇಷ ಸ್ನೇಹ' ಕಾರಣ ಎಂಬ ಮಾತುಗಳು ಕೇಳಿ ಬಂದಿವೆ.
ಯಲಹಂಕದ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಹರ್ಷರಾಜ್ (16) ಹತ್ಯೆಯಾದ ದುರ್ದೈವಿ. ಈ ಘಟನೆ ಸಂಬಂಧ ಮೃತನ ಮೂವರು ಸ್ನೇಹಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶಾಲಾ ವಾರ್ಷಿಕೋತ್ಸವ ಮುಗಿಸಿ ಹರ್ಷರಾಜ್ ಹಾಗೂ ಆತನ ಗೆಳೆಯರು ಮನೆಗೆ ಮರಳುವಾಗ ಮಾರ್ಗ ಮಧ್ಯೆ ಗಲಾಟೆ ನಡೆದಿದೆ. ಆ ವೇಳೆ ಕೋಪಗೊಂಡ ವಿದ್ಯಾರ್ಥಿಗಳು ಹರ್ಷರಾಜ್ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಚಾಕುವಿನಿಂದ ಇರಿದಿದ್ದಾರೆ. ಬಳಿಕ ಅವರೇ ಭೀತಿಗೊಂಡು ಹಲ್ಲೆಗೊಳಗಾದವನನ್ನು ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಆತ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ವಾರ್ಷಿಕೋತ್ಸವದ ನಂತರ ಕೊಲೆ: ಯಲಹಂಕದ ಬಳಿ ಅಯ್ಯಪ್ಪ ಸ್ವಾಮಿ ದೇವಸ್ಥಾನ ರಸ್ತೆ ನಿವಾಸಿ ನಾರಾಯಣಪ್ಪ ಮತ್ತು ಅನ್ನಪೂರ್ಣ ದಂಪತಿಯ 2ನೇ ಪುತ್ರ ಹರ್ಷರಾಜ್, ಮನೆ ಹತ್ತಿರದ ಸಂಯುಕ್ತ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಇತ್ತೀಚೆಗೆ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ವಾಲಿಬಾಲ್ನಲ್ಲಿ ಪ್ರಥಮ ಬಹುಮಾನ ಗಳಿಸಿದ್ದ. ಈ ಹಿನ್ನೆಲೆಯಲ್ಲಿ ಸೋಮವಾರ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದ ಹರ್ಷ, ಮಧ್ಯಾಹ್ನ 3 ಗಂಟೆ ಸುಮಾರಿಗೆ ಊಟ ಮುಗಿಸಿ ಮನೆಗೆ ತೆರಳುತ್ತಿದ್ದ. ಆ ವೇಳೆ ಶಾಲೆಯಿಂದ 100 ಮೀಟರ್ ದೂರದಲ್ಲಿರುವ ರೈಲ್ವೆ ಹಳಿಯ ಪಕ್ಕದ ರಸ್ತೆಯಲ್ಲಿ ಐವರು ಸಹಪಾಠಿಗಳು (ಪಿಯುಸಿ ವಿದ್ಯಾರ್ಥಿಗಳು ಸೇರಿದಂತೆ) ಹರ್ಷರಾಜ್ ಜತೆ ಜಗಳ ತೆಗೆದಿದ್ದಾರೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೆರಳಿದ ಎದುರಾಳಿ ವಿದ್ಯಾರ್ಥಿಗಳು, ಹರ್ಷನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಆ ವೇಳೆ ಆತನ ಹೊಟ್ಟೆಗೆ ಚಾಕುವಿನಿಂದ ಇರಿದು ಕೊಂದಿದ್ದಾರೆ ಎಂದು ತಿಳಿದು ಬಂದಿದೆ.
ಆಸ್ಪತ್ರೆಗೆ ಬಂದು ಸಿಕ್ಕಿಬಿದ್ದರು: ಹಲ್ಲೆಗೊಳಗಾಗಿ ತೀವ್ರ ರಕ್ತ್ತಸ್ರಾವದಿಂದ ನರಳುತ್ತಿದ್ದ ಹರ್ಷರಾಜ್'ನನ್ನು ಚೂರಿ ಇರಿದ ವಿದ್ಯಾರ್ಥಿಗಳೇ ಆಸ್ಪತ್ರೆ ಬಳಿಗೆ ಕರೆದು ತಂದು ಬಿಟ್ಟು ಬೈಕ್'ನಲ್ಲಿ ಪರಾರಿಯಾಗಿದ್ದರು. ಇದಾದ ಬಳಿಕ ಘಟನೆಯಲ್ಲಿ ಗಾಯಗೊಂಡಿದ್ದ ಆ ವಿದ್ಯಾರ್ಥಿಗಳು, ಚಿಕಿತ್ಸೆಗೆ ಅದೇ ಆಸ್ಪತ್ರೆಗೆ ಬಂದಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ ಎಂದು ಮೂಲಗಳು ಹೇಳಿವೆ.
ಪಿಯುಸಿ ಸ್ನೇಹಕ್ಕೆ ಬಲಿಯಾದ ‘ಹರ್ಷ'?
ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದ ಹಷÜರ್, ಆ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಚಿರಪರಿಚಿತನಾಗಿದ್ದ. ಹಾಗಾಗಿ ಅವನಿಗೆ ಪಿಯುಸಿ ವಿದ್ಯಾರ್ಥಿನಿಯೊಬ್ಬಳ ಜತೆ ಗೆಳೆತನವಿತ್ತು. ಆದರೆ ಈ ಗೆಳೆತನಕ್ಕೆ ಅವನ ಕೆಲ ಸಹಪಾಠಿಗಳಲ್ಲಿ ಅಸಹನೆಯಿತ್ತು. ಇದೇ ವಿಷಯವಾಗಿ ಅವರ ನಡುವೆ ಆಗಾಗ್ಗೆ ಮಾತಿನ ಚಕಮಕಿ ಸಹ ನಡೆಯುತ್ತಿತ್ತು. ಈ ಗಲಾಟೆಯ ವಿಚಾರ ತಿಳಿದಿದ್ದ ಪಿಯುಸಿ ವಿದ್ಯಾರ್ಥಿಗಳು, ಕಿರಿಯ ವಿದ್ಯಾರ್ಥಿಗಳಿಗೆ ‘ಪಾಠ' ಹೇಳಿದ್ದರು. ತಮ್ಮ ಸಹಪಾಠಿಯ ವಿಷಯಕ್ಕೆ ಬಾರದಂತೆ ಅವರು ತಾಕೀತು ಮಾಡಿದ್ದರು. ಆದರೆ ಸೋಮವಾರ ಇದೇ ವಿಷಯಕ್ಕೆ ಉಂಟಾದ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ ಎಂದು ವಿದ್ಯಾರ್ಥಿಯೊಬ್ಬರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಪಾಠದಲ್ಲಿ ಹಿಂದಿದ್ದ, ಆಟದಲ್ಲಿ ಮುಂದಿದ್ದ
ಸಹಪಾಠಿಗಳಿಂದಲೇ ಕೊಲೆಯಾದ ಯಲಹಂಕದ ಸರ್ಕಾರಿ ಪದವಿ ಪೂರ್ವ ಕಾಲೇ ಜು ಮತ್ತು ಪ್ರೌಢ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಹರ್ಷರಾಜ್ ಓದಿನಲ್ಲಿ ಹಿಂದುಳಿ ದಿದ್ದರೂ ಉತ್ತಮ ಕ್ರೀಡಾಳು. ವಾಲಿಬಾಲ್ನಲ್ಲಿ ಹೆಚ್ಚಿನ ಸಾಧನೆಗೈದಿದ್ದ. ಥ್ರೋ ಬಾಲ್, ಕಬ್ಬಡಿ, ಫುಟ್ಬಾಲ್ನಲ್ಲೂ ಈತ, ಜಿಲ್ಲಾ, ವಲಯ ಮಟ್ಟದಲ್ಲೂ ಭಾಗವಹಿಸಿದ್ದನು. ಇತ್ತೀಚೆಗೆ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ ವಾಲಿ ಬಾಲ್ನಲ್ಲಿ ಪ್ರಥಮ ಬಹು ಮಾನ ಗಳಿಸಿದ್ದ. ಆದರೆ, ವಿದ್ಯಾಭ್ಯಾಸದಲ್ಲಿ ಸಾಧಾರಣ ಮಟ್ಟದ ಲ್ಲಿದ್ದ ಆತ, ಶಾಲೆಗೂ ಗೈರಾಗುತ್ತಿದ್ದ.
ಕನ್ನಡಪ್ರಭ ವಾರ್ತೆ
epaper.kannadaprabha.in