Asianet Suvarna News Asianet Suvarna News

ಸಿರಿಧಾನ್ಯ ಸಂರಕ್ಷಕರ ಸಂಘ : ಅಸಾಮಾನ್ಯ ಕನ್ನಡಿಗ

ಕಳೆದ 25 ವರ್ಷಗಳಿಂದ ಈ ಊರಿನಲ್ಲಿ ಹಾರಕ ಬೆಳೆದಿರಲಿಲ್ಲ. ಆದರೆ, ಕ್ರಮೇಣ ಒಂದು ದಿನ ಕೃಷಿ ಸಮಾವೇಶವೊಂದರಲ್ಲಿ ವಿಜ್ಞಾನಿಯೊಬ್ಬರು ಹಾರಕದ ಮಹತ್ವವನ್ನು ಬಿಡಿಬಿಡಿಯಾಗಿ ಹೇಳಿದರು. ಅಂದಿನಿಂದ ಈ ಊರಿನ ಯುವಕರ ತಂಡವೊಂದು ಹಾರಕ ಬೆಳೆಯುವ ಸಂಕಲ್ಪ ಮಾಡಿತು.

Siridhanya saviors Trust

ಸಿರಿಧಾನ್ಯಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ. ಸಜ್ಜೆ, ನವಣೆ, ಹಾರಕ ಇವುಗಳಿಗೆಲ್ಲ ಈಗ ಬಂಗಾರದಂತಹ ಬೆಲೆ ಬಂದಿದೆ. ಒಂದು ಕಾಲದಲ್ಲಿ ಈ ಬೆಳೆಗಳನ್ನು ಬರಗಾಲದ ಬೆಳೆಗಳು ಎಂದು ಕರೆಯುತ್ತಿದ್ದರು. ಅತಿ ಕಡಿಮೆ ನೀರಿದ್ದರೂ ಬೆಳೆಯುವ ಶಕ್ತಿ ಇದ್ದ ಕಾರಣ ಬರಗಾಲದಲ್ಲಿ ಜನರು ಇವುಗಳನ್ನು ಬೆಳೆದು ಬಳಸುತ್ತಿದ್ದರು.

ಆದರೆ, ಈಗ ಎಲ್ಲವೂ ಅದಲು ಬದಲಾಗಿದೆ. ಅಂದು ಬರಗಾಲಕ್ಕೆ ಆಸರೆಯಾಗಿದ್ದ ಸಿರಿ`ಧಾನ್ಯಗಳು ಈ ಸಿರಿವಂತಿಕೆ ತರುವ ಬೆಳೆಗಳಾಗಿ ಬೆಳೆದು ನಿಂತಿವೆ. ಈ ಅವಕಾಶವನ್ನು ಬಳಸಿಕೊಂಡು ಕೃಷಿಯ ಹಾಗೂ ಊರಿನ ಬರವನ್ನು ಹೊಡೆದೋಡಿಸಿದ ಕೀರ್ತಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಗೋಪಾಲನಹಳ್ಳಿ ಗ್ರಾಮಸ್ಥರು. ಒಂದು ಕಾಲದಲ್ಲಿ ಹಾರಕ ಈ ಊರಿನ ಪ್ರಮುಖ ಬೆಳೆಯಾಗಿತ್ತು. ಆದರೆ, ಕ್ರಮೇಣ ಈ ಊರಿನ ಜನ ಹಾರಕವನ್ನು ಕೈ ಬಿಟ್ಟರು. ಕಳೆದ 25 ವರ್ಷಗಳಿಂದ ಈ ಊರಿನಲ್ಲಿ ಹಾರಕ ಬೆಳೆದಿರಲಿಲ್ಲ. ಆದರೆ, ಕ್ರಮೇಣ ಒಂದು ದಿನ ಕೃಷಿ ಸಮಾವೇಶವೊಂದರಲ್ಲಿ ವಿಜ್ಞಾನಿಯೊಬ್ಬರು ಹಾರಕದ ಮಹತ್ವವನ್ನು ಬಿಡಿಬಿಡಿಯಾಗಿ ಹೇಳಿದರು. ಅಂದಿನಿಂದ ಈ ಊರಿನ ಯುವಕರ ತಂಡವೊಂದು ಹಾರಕ ಬೆಳೆಯುವ ಸಂಕಲ್ಪ ಮಾಡಿತು.

ಊರಿನ 20 ಯುವಕರು ಸೇರಿ ಹಾರಕ ಬೆಳೆಗಾರರ ಸಂಘ ಸ್ಥಾಪಿಸಿದರು. ಉಪನ್ಯಾಸಕ ಹಾಗೂ ಕೃಷಿಕರೂ ಆಗಿರುವ ರಘು ಇದರ ನೇತೃತ್ವ ವಹಿಸಿದರು. ಇದಕ್ಕೆ ಊರಿನ ಉಳಿದವರೆಲ್ಲ ಸಾಥ್ ಕೊಟ್ಟರು. ಆದರೆ, ಆರಂಭ`ದಲ್ಲಿ ಇದರ ಬೀಜಗಳು ಸಿಗಲೇ ಇಲ್ಲ. ಕಡೆಗೆ ಪಕ್ಕದೂರಿನ ರೈತರೊಬ್ಬರು ತಮ್ಮ 1 ಎಕರೆ ಜಮೀನಿನಲ್ಲಿ ಬೆಳೆದಿದ್ದರು. ಅಲ್ಲಿಂದ ತಂದ ಬೀಜಗಳನ್ನು ಬಿತ್ತಿ ಈ ಗೋಪಾಲನಹಳ್ಳಿ ಕಳೆದ 4 ವರ್ಷಗಳಿಂದ ಈಗ ಹಾರಕ ಬೆಳೆಯಲಾರಂಭಿಸಿದ್ದಾರೆ. ಈಗ 40ಕ್ಕೂ ಹೆಚ್ಚು ಕುಟುಂಬಗಳು ಕನಿಷ್ಠ ಒಂದು ಎಕರೆಯಷ್ಟು ಬೆಳೆಯುತ್ತಾರೆ. ಇದರ ಜತೆ ಇತರೆ ಸಿರಿಧಾನ್ಯಗಳಾದ ಸಜ್ಜೆ, ನವಣೆ, ರಾಗಿ, ಜೋಳ ಹೀಗೆ ಎಲ್ಲವನ್ನೂ ಸ್ವಲ್ಪ ಸ್ವಲ್ಪ ಕಡ್ಡಾಯವಾಗಿ ಬೆಳೆಯಲಾಗುತ್ತದೆ. ಇಡೀ ಊರು ಸುಸ್ಥಿರ ಕೃಷಿ ಅಳವಡಿಸಿಕೊಂಡಿದ್ದು, ಯಾರೂ ರಾಸಾಯನಿಕ ಗೊಬ್ಬರ ಬಳಸುವುದಿಲ್ಲ. ಇಷ್ಟೇ ಅಲ್ಲ, ಈ ಊರಿನಲ್ಲಿ ಬೆಳೆದ ಸಿರಿಧಾನ್ಯಕ್ಕೆ ಊರಿನವರೇ ದರ ನಿಗದಿ ಮಾಡುತ್ತಾರೆ. ಖರೀದಿ ಮಾಡಲು ಈ ಊರಿಗೇ ಹೋಗಬೇಕು.

ಸಿರಿಧಾನ್ಯಗಳನ್ನು ಜನ ಮರೆಯುತ್ತಿದ್ದಾರೆ. ಆದರೆ, ಈ ಊರಿನವರು ಸಿರಿಧಾನ್ಯಗಳಿಗೆ ಜೀವ ತುಂಬುತ್ತಿದ್ದಾರೆ. ಸಿರಿಧಾನ್ಯಗಳ ಸೇವೆನೆ ಮಾಡಿದರೆ ಮಾತ್ರ ನಮ್ಮ ಆಹಾರ ಸಂಪೂರ್ಣವಾಗುತ್ತದೆ. ಆದ್ದರಿಂದ ನಾವೆಲ್ಲ ಇಂತಿಷ್ಟೇ ಪ್ರಮಾಣದಲ್ಲಿ ಸಿರಿಧಾನ್ಯ ಬೆಳೆಯಲೇಬೇಕು ಎನ್ನುವ ಷರತ್ತು ಹಾಕಿಕೊಂಡಿದ್ದೇವೆ ಎನ್ನುತ್ತಾರೆ. ಈಗ ಊರಿನವರು ಸಿರಿಧಾನ್ಯ ಬೆಳೆದು ನೆಮ್ಮದಿಯ ಜೀವನ ಮಾಡುತ್ತಿದ್ದಾರೆ.

Follow Us:
Download App:
  • android
  • ios