ಸಭಾನಾಯಕ ಸ್ಥಾನದಿಂದ ಶರದ್ ಯಾದವ್ ವಜಾ
ಜೆಡಿಯು ಹಿರಿಯ ನಾಯಕ ಶರದ್ ಯಾದವ್’ರನ್ನು ರಾಜ್ಯಸಭೆಯಲ್ಲಿ ಸಂಸದೀಯ ಪಕ್ಷದ ನಾಯಕನ ಸ್ಥಾನದಿಂದ ಜೆಡಿಯು ಇಂದು ವಜಾಗೊಳಿಸಿದೆ. ಪಕ್ಷ-ವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆಯೆಂದು ಜೆಡಿಯು ಹೇಳಿದೆ.
ನವದೆಹಲಿ: ಜೆಡಿಯು ಹಿರಿಯ ನಾಯಕ ಶರದ್ ಯಾದವ್’ರನ್ನು ರಾಜ್ಯಸಭೆಯಲ್ಲಿ ಸಂಸದೀಯ ಪಕ್ಷದ ನಾಯಕನ ಸ್ಥಾನದಿಂದ ಜೆಡಿಯು ಇಂದು ವಜಾಗೊಳಿಸಿದೆ.
ಪಕ್ಷ-ವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆಯೆಂದು ಜೆಡಿಯು ಹೇಳಿದೆ.
ಶರದ್ ಯಾದವ್’ರ ಇತ್ತೀಚಿಗಿನ ಚಟುವಟಿಕೆಗಳ ಹಿನ್ನೆಲೆಯಲ್ಲಿ ಈ ಕ್ರಮ ಅನಿವಾರ್ಯವಾಗಿದೆ. ಪಕ್ಷದ ಜವಾಬ್ದಾರಿಯುತ ಸ್ಥಾನದಲ್ಲಿದ್ದು ಈ ರೀತಿ ವರ್ತಿಸಿದರೆ ಅದನ್ನು ಖಂಡಿಸುವುದು ಅತೀ ಅಗತ್ಯವಾಗಿದೆ, ಎಂದು ಬಿಹಾರ ಜೆಡಿಯು ಅಧ್ಯಕ್ಷ ವಸಿಷ್ಠ ನಾರಾಯಣ್ ಏಎನ್ಐ’ಗೆ ತಿಳಿಸಿದ್ದಾರೆ.
ಶರದ್ ಯಾದವ್ ಸ್ಥಾನವನ್ನು ಆರ್’ಸಿಪಿ ಯಾದವ್ ತುಂಬಲಿದ್ದಾರೆ. ಈ ಬಗ್ಗೆ ಪಕ್ಷದ ಸಂಸದರು ರಾಜ್ಯಸಭಾಧ್ಯಕ್ಷ ಎಂ. ವೆಂಕಯ್ಯ ನಾಯ್ಡುರನ್ನು ಭೇಟಿಯಾಗಿ ಪತ್ರವನ್ನು ಹಸ್ತಾಂತರಿಸಿದ್ದಾರೆ ಎಂದು ನಾರಾಯಣ್ ಹೇಳಿದ್ದಾರೆ.
1984 ಬ್ಯಾಚಿನ ಉತ್ತರ ಪ್ರದೇಶ ಕೇಡರ್ ಆರ್’ಸಿಪಿ ಸಿಂಗ್ 2010ರಲ್ಲಿ ಸ್ವಯಂ ನಿವೃತ್ತಿ ತೆಗೆದುಕೊಂಡು ಜೆಡಿಯು ಸೇರಿದ್ದರು. ನಿತೀಶ್ ಆಪ್ತರಾಗಿರುವ ಆರ್’ಸಿಪಿ ಸಿಂಗ್, 2015 ಬಿಹಾರ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಪ್ರಪಥಮವಾಗಿ ಮಹಾಮೈತ್ರಿ ಪ್ರಸ್ತಾಪವನಿಟ್ಟಿದ್ದರು ಎಂದು ಹೇಳಲಾಗಿದೆ.
ಬಿಹಾರದ ಮಹಾಮೈತ್ರಿಯ ಭಾಗವಾಗಿರುವ ಕಾಂಗ್ರೆಸ್ ಕರೆದಿದ್ದ ಸಭೆಯಲ್ಲಿ ಭಾಗವಹಿಸಿದ ಕಾರಣಕ್ಕೆ ಸಂಸದ ಅಲೀ ಅನ್ವರ್ ಅವರನ್ನು ಪಕ್ಷದ ಸಂಸದೀಯ ಮಂಡಳಿಯಿಂದ ನಿತೀಶ್ ಕುಮಾರ್ ನಿನ್ನೆ ಅಮಾನತು ಮಾಡಿದ್ದಾರೆ.