ಜಿಎಸ್ಟಿ ಕಾಯ್ದೆ ವಿರೋಧಿಸಿ ದೇಶವ್ಯಾಪಿ ಪ್ರತಿಭಟನೆ: ಕೇಂದ್ರದ ವಿರುದ್ಧ ಮೆಡಿಕಲ್, ಹೋಟೆಲ್ ಸಂಘಗಳ ಸಮರ
ಸಿಲಿಕಾನ್ ಸಿಟಿಯಲ್ಲಿ ಇವತ್ತು ಹೋಟೆಲ್'ಗಳಲ್ಲಿ ಊಟ ಸಿಗುವುದಿಲ್ಲ. ಇತ್ತ ಮೆಡಿಕಲ್'ಗಳಲ್ಲಿ ಔಷಧಿಯೂ ದೊರೆಯುವುದಿಲ್ಲ. ಈ ಮೂಲಕ ಎರಡು ಸಂಘಟನೆಗಳು ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಿವೆ.
ಬೆಂಗಳೂರು(ಮೇ.30): ಸಿಲಿಕಾನ್ ಸಿಟಿಯಲ್ಲಿ ಇವತ್ತು ಹೋಟೆಲ್'ಗಳಲ್ಲಿ ಊಟ ಸಿಗುವುದಿಲ್ಲ. ಇತ್ತ ಮೆಡಿಕಲ್'ಗಳಲ್ಲಿ ಔಷಧಿಯೂ ದೊರೆಯುವುದಿಲ್ಲ. ಈ ಮೂಲಕ ಎರಡು ಸಂಘಟನೆಗಳು ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಿವೆ.
ಬೆಂಗಳೂರಿಗರೇ ಇವತ್ತು ಹೋಟೆಲ್ ಊಟ-ತಿಂಡಿ ನಂಬಲೇಬೇಡಿ
ಬೆಂಗಳೂರಿಗರೇ ಆಫೀಸ್'ಗೆ ಹೋದರು ಹೋಟೆಲ್'ಗೆ ಊಟಕ್ಕೆ ಹೋಗುತ್ತೀರಾ? ತಿಂಡಿನೂ ಅಲ್ಲೇ ಮಾಡುತ್ತೀರಾ? ಹಾಗಿದ್ದರೆ ಇವತ್ತು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಿ. ಯಾಕೆಂದರೆ ಇವತ್ತು ಬೆಂಗಳೂರಲ್ಲಿ ಹೋಟೆಲ್ ತೆರೆಯುವುದಿಲ್ಲ. ಫುಟ್ ಪಾತ್ ಹೋಟೆಲ್'ನಿಂದ ಹಿಡಿದು ಬೃಹತ್ ಹೋಟೆಲ್'ಗಳವರೆಗೂ ಬಂದ್. ಜಿಎಸ್'ಟಿಯನ್ನು ವಿರೋಧಿಸಿ ಹೋಟೆಲ್'ಗಳ ಸಂಘ ದಕ್ಷಿಣ ಭಾರತದಾದ್ಯಂತ ಬಂದ್'ಗೆ ಕರೆ ನೀಡಿದೆ. ಇದಕ್ಕೆ ಬೃಹತ್ ಬೆಂಗಳೂರು ಹೋಟೆಲ್'ಗಳ ಸಂಘ ಕೂಡ ಬೆಂಬಲ ನೀಡಿದೆ. ಹೀಗಾಗಿ ಹೋಟೆಲ್,ಲಾಡ್ಜ್ಬೇಕರಿಗಳು ಕೂಡ ಇವತ್ತು ತೆರೆಯುವುದು ಡೌಟ್.
ಇಂದು ರಾಷ್ಟ್ರವ್ಯಾಪಿ ಮೆಡಿಕಲ್ ಶಾಪ್ಗಳು ಬಂದ್: ರಾಜ್ಯಾದ್ಯಂತ 28 ಸಾವಿರಕ್ಕೂ ಅಧಿಕ ಮೆಡಿಕಲ್ ಶಾಪ್'ಗಳು ಕ್ಲೋಸ್
ಜಿಎಸ್ಟಿ ವಿರುದ್ಧ ಹೋಟೆಲ್ ಸಂಘಟನೆಗಳು ಬಂದ್'ಗೆ ಕರೆ ನೀಡಿದ್ದರೆ, ಇತ್ತ ಆನ್'ಲೈನ್ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟಿದ್ದನ್ನು ವಿರೋಧಿಸಿ ರಾಷ್ಟ್ರವ್ಯಾಪಿ ಔಷಧ ವ್ಯಾಪಾರಿಗಳ ಸಂಘ ಬಂದ್'ಗೆ ಕರೆ ನೀಡಿದೆ. ಹೀಗಾಗಿ ರಾಜ್ಯಾದ್ಯಂತ 28 ಸಾವಿರಕ್ಕೂ ಅಧಿಕ ಮೆಡಿಕಲ್ ಶಾಪ್'ಗಳು ಬಂದ್ ಆಗುತ್ತಿವೆ.
ಇದರಿಂದ ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆ ಆಗದಂತೆ ಆರೋಗ್ಯ ಇಲಾಖೆ ಸೂಕ್ತ ಕ್ರಮಕ್ಕೆ ಮುಂದಾಗಿದೆ.
ಎಲ್ಲೆಲ್ಲಿ ಸಿಗಲಿದೆ ಮೆಡಿಷನ್
ಇವತ್ತು ಎಂದಿನಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಸಿಗುತ್ತದೆ, ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಮೆಡಿಕಲ್ ಶಾಪ್'ಗಳು ಕೂಡ ಬಂದ್ ಆಗಲ್ಲ. ನರ್ಸಿಂಗ್ ಹೋಂಗಳಲ್ಲಿನ ಔಷಧ ಅಂಗಡಿಗಳೂ ಎಂದಿನಂತೆ ತೆರೆದಿರುತ್ತವೆ. ಜೊತೆಗೆ ಅಗತ್ಯ ಔಷಧಗಳೊಂದಿಗೆ 108 ಆ್ಯಂಬುಲೆನ್ಸ್ ಕೂಡಾ ಸಿದ್ಧವಾಗಿರುತ್ತದೆ, 6 ಸಹಾಯಕ ಔಷಧ ನಿಯಂತ್ರಕರನ್ನು ನೋಡೆಲ್ ಅಧಿಕಾರಿಗಳಾಗಿ ನೇಮಕ ಮಾಡಲಾಗಿದೆ. ಜನರ ಸಹಾಯಕ್ಕಾಗಿ ದೂರವಾಣಿ ಸಂಖ್ಯೆ 104ನ್ನು ಸಂಪರ್ಕಿಸಬಹುದಾಗಿದೆ.
ಇನ್ನು ಅಷ್ಟೇ ಅಲ್ಲದೆ ಸಾರ್ವಜನಿಕರಿಗೆ ತೊಂದರೆ ಆಗಬಾರದು ಅಂತ ಬೆಂಗಳೂರಿನ 6 ವೃತ್ತಕ್ಕೆ 6 ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ. ಒಟ್ಟಿನಲ್ಲಿ ಕೇಂದ್ರ ಹಾಗೂ ಸಂಘಟನೆಗಳ ಜಟಾಪಟಿಯಿಂದ ಇವತ್ತು ಔಷಧಿ ಹಾಗೂ ಆಹಾರ ವಿಚಾರದಲ್ಲಿ ಜನ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.