ಪ್ರೇಮ ಗಲಾಟೆ: ಮದ್ಯದ ಅಮಲಿನಲ್ಲಿ ಮೊಬೈಲ್ ಮಾತು ಯುವಕನ ಜೀವಕ್ಕೆ ಕುತ್ತು
ಮದ್ಯದ ಅಮಲಿನಲ್ಲಿದ್ದ ಯುವಕನೊಬ್ಬ ಪ್ರೇಯಸಿಯೊಂದಿಗೆ ಜಗಳವಾಡುತ್ತ ನಾಲ್ಕು ಅಂತಸ್ತಿನ ಕಟ್ಟಡದಿಂದ ಹಾರಿ ಸಾವನ್ನಪ್ಪಿರುವ ಘಟನೆ ಬುಧವಾರ ತಡರಾತ್ರಿ ಸಂಜಯನಗರದಲ್ಲಿ ನಡೆದಿದೆ.
ಬೆಂಗಳೂರು(ಫೆ.24): ಮದ್ಯದ ಅಮಲಿನಲ್ಲಿದ್ದ ಯುವಕನೊಬ್ಬ ಪ್ರೇಯಸಿಯೊಂದಿಗೆ ಜಗಳವಾಡುತ್ತ ನಾಲ್ಕು ಅಂತಸ್ತಿನ ಕಟ್ಟಡದಿಂದ ಹಾರಿ ಸಾವನ್ನಪ್ಪಿರುವ ಘಟನೆ ಬುಧವಾರ ತಡರಾತ್ರಿ ಸಂಜಯನಗರದಲ್ಲಿ ನಡೆದಿದೆ.
ಗಜೇಂದ್ರ (24) ಮೃತ ಯುವಕ. ಕಂಠಪೂರ್ತಿ ಮದ್ಯ ಸೇವಿಸಿದ್ದ ಈತ ಮೊಬೈಲ್ನಲ್ಲಿ ಪ್ರೇಯಸಿಯೊಂದಿಗೆ ಜಗಳವಾಡುತ್ತಾ ಸಂಜಯನಗರದಲ್ಲಿರುವ ಆರ್ಎಂವಿ ಆಸ್ಪತ್ರೆ ಪಕ್ಕದ ಮೆಡಿಕಲ್ ಆ್ಯಂಡ್ ಲ್ಯಾಬೋರೇಟರಿ ಕಟ್ಟಡದ ಮೇಲೆ ಏರಿದ್ದಾನೆ. ಬಳಿಕ ಆಕೆಯೊಂದಿಗೆ ಜಗಳ ಮಾಡಿಕೊಂಡು ಅಲ್ಲಿಂದ ಹಾರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೋಲಾರದ ಮಾಲೂರಿನವನಾದ ಈತ 10 ವರ್ಷಗಳಿಂದ ಇಲ್ಲಿನ ಗೆದ್ದಲಹಳ್ಳಿಯಲ್ಲಿ ಸ್ನೇಹಿತರೊಂದಿಗೆ ನೆಲೆಸಿದ್ದು, ಬಿಇಎಲ್ನಲ್ಲಿ ಕ್ಯಾಟರಿಂಗ್ ಕೆಲಸ ಮಾಡಿಕೊಂಡಿದ್ದ. ಈ ನಡುವೆ ಕೆಲ ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಈತ, ಇತ್ತೀಚೆಗೆ ಆಕೆಯೊಂದಿಗೆ ಜಗಳ ಮಾಡಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ನಿತ್ಯ ಮದ್ಯ ಸೇವಿಸುತ್ತಿದ್ದ ಗಜೇಂದ್ರ ಆಕೆಗೆ ೆನ್ ಮಾಡಿ ಜಗಳ ಮಾಡುತ್ತಿದ್ದ. ಬುಧವಾರ ಕೂಡ ರಾತ್ರಿ 8.30ರ ಸುಮಾರಿಗೆ ಸ್ನೇಹಿತರ ಜತೆ ಕಂಠಪೂರ್ತಿ ಮದ್ಯ ಸೇವಿಸಿದ್ದಾನೆ. ಬಳಿಕ ಬಾರ್ ಮುಂಭಾಗದ ಪಾರ್ಕ್ನಲ್ಲಿ ಸ್ನೇಹಿತರ ಜತೆ ಕಾಲ ಕಳೆದಿದ್ದಾನೆ.
ನಂತರ ಸ್ನೇಹಿತನೊಬ್ಬನನ್ನು ಮನೆಗೆ ಬಿಟ್ಟು ಬಂದು ಮದ್ಯದ ಅಮಲಿನಲ್ಲೇ ತನ್ನ ಪ್ರೇಯಸಿಗೆ ೆನ್ ಮಾಡಿದ್ದಾನೆ. ಆಕೆಯೊಂದಿಗೆ ಮಾತನಾಡುತ್ತಾ ತಡರಾತ್ರಿ 11.30ರ ಸುಮಾರಿಗೆ ಆರ್ಎಂವಿ ಆಸ್ಪತ್ರೆ ಪಕ್ಕದ ಮೆಡಿಕಲ್ ಸ್ಟೋರ್ ಮತ್ತು ಲ್ಯಾಬೋರೇಟರಿ ಕಟ್ಟಡದ ಮೇಲೆ ಏರಿದ್ದಾನೆ. ಭದ್ರತಾ ಸಿಬ್ಬಂದಿ ಕೂಗಿಕೊಂಡರು ನಿಂತಿಲ್ಲ.
ಗಜೇಂದ್ರ ಕಟ್ಟಡ ತುದಿಗೆ ಹೋಗುತ್ತಿದ್ದಂತೆ ಅನುಮಾನಗೊಂಡ ಭದ್ರತಾ ಸಿಬ್ಬಂದಿ ಹಿಂಬಾಲಿಸಿ ಯಾರೆಂದು ಕೂಗಿಕೊಂಡಿದ್ದಾರೆ. ಇದನ್ನು ನಿರ್ಲಕ್ಷ್ಯಸಿದ ಗಜೇಂದ್ರ, ಯುವತಿಗೆ ‘ಮೊದಲು ನೀನು ರೂಂನಿಂದ ಹೊರಗೆ ಬಾ. ನೀನು ನನಗೆ ಸಹಕರಿಸುತ್ತಿಲ್ಲ. ನಾನು ಇರುವುದಿಲ್ಲ’ ಎಂದು ಜೋರಾಗಿ ಮಾತನಾಡುತ್ತಾ ಕಟ್ಟಡದ ಮೇಲಿಂದ ಹಾರಿದ್ದಾನೆ. ಬಿದ್ದ ರಭಸಕ್ಕೆ ಗಜೇಂದ್ರ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ವೇಳೆ ಗಜೇಂದ್ರನ ಸ್ನೇಹಿತ ಕಟ್ಟಡದ ಕಳಗೆ ನಿಂತಿದ್ದ. ಗಜೇಂದ್ರನ ಮೊಬೈಲ್ ಸಂಪೂರ್ಣವಾಗಿ ಒಡೆದು ಹೋಗಿದ್ದು, ವಿಧಿವಿಜ್ಞಾನ ಪರೀಕ್ಷಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರ ಆತನ ಜತೆ ಮಾತನಾಡುತ್ತಿದ್ದ ಯುವತಿ ಯಾರು?, ಸಾವಿಗೆ ಕಾರಣವೇನು? ಎಂಬುದು ತಿಳಿದು ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸಂಜಯ್ ನಗರ ಠಾಣೆಯಲ್ಲಿ ದಾಖಲಾಗಿದೆ.