ತಿವಾರಿ ಪ್ರಕರಣ: ಉತ್ತರ ಸಿಗದ ಪ್ರಶ್ನೆ ಮತ್ತು ಅನುಮಾನಗಳ ಪಟ್ಟಿ
ಅನುರಾಗ್ ತಿವಾರಿಗೆ ಸಾವಿನ ಮುನ್ಸೂಚನೆ ಮೊದಲೇ ಸಿಕ್ಕಿತ್ತಾ? ಪ್ರಾಣಕ್ಕೆ ತೊಂದರೆ ಇದೆ ಎಂದು ಸೋದರನ ಜೊತೆ ವಾಟ್ಸ್'ಆ್ಯಪ್'ನಲ್ಲಿ ಹೇಳಿಕೊಂಡಿದ್ಯಾಕೆ? ಕುಟುಂಬದವರನ್ನು ಬೆಂಗಳೂರಿಗೆ ಬರಬೇಡಿ ಎಂದು ತಿವಾರಿ ಹೇಳಿದ್ಯಾಕೆ? ರಾಜಕೀಯ ವ್ಯಕ್ತಿಗಳೊಂದಿಗೆ ಸಂಘರ್ಷ ಇತ್ತು ಎಂಬ ತಿವಾರಿ ಕುಟುಂಬದ ಆರೋಪ ಯಾಕೆ? ಆಹಾರ ಇಲಾಖೆ ಹಗರಣ ಬಯಲಿಗೆಳೆಯದಂತೆ ತಿವಾರಿ ಮೇಲೆ ಒತ್ತಡವಿತ್ತಾ?
ಬೆಂಗಳೂರು(ಮೇ 20): ಅನುರಾಗ್ ತಿವಾರಿ ಸಾವು ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸುತ್ತಿದೆ. ಕರ್ನಾಟಕದ ದಕ್ಷ, ಪ್ರಾಮಾಣಿಕ ಅಧಿಕಾರಿ ಎನಿಸಿದ್ದ ತಿವಾರಿ ಮೇ 17ರಂದು ಉತ್ತರಪ್ರದೇಶದ ರಾಜಧಾನಿಯಲ್ಲಿ ಮೃತಪಟ್ಟಿದ್ದರು. ಅವರದ್ದು ಅಸಹಜ ಸಾವು ಎಂಬ ವಾದ ಬಲವಾಗಿ ಕೇಳಿಬರುತ್ತಿದೆ. ರಾಜ್ಯದಲ್ಲಿ ಅವರನ್ನು ಸರಿಯಾಗಿ ನಡೆಸಿಕೊಳ್ಳುತ್ತಿರಲಿಲ್ಲ ಎಂಬ ಮಾಹಿತಿಯಿಂದ ಹಿಡಿದು ಅವರು ಉತ್ತರಪ್ರದೇಶದಲ್ಲಿ ಅಸಹಜವಾಗಿ ಮೃತಪಟ್ಟವರೆಗಿನ ಘಟನೆಗಳೆಲ್ಲವೂ ಅನೇಕ ಅನುಮಾನ ಮತ್ತು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿವೆ.
ಉತ್ತರ ಸಿಗದ ಪ್ರಶ್ನೆಗಳು:
1) ಯಾವತ್ತೂ ವಾಕಿಂಗ್ಗೆ ಹೋಗದ ಅನುರಾಗ್ ಅವತ್ತೇ ಯಾಕೆ ಹೋದರು?
2) ಅನುರಾಗ್ ಸಾವಿಗಿಂತ ಮುಂಚೆ ಮುಖದ ಮೇಲೆ ಗಾಯಗಳು ಏಕಾಗಿದ್ದವು?
3) ಸಂಜೆ 5.30ಕ್ಕೆ ಪೋಸ್ಟ್ ಮಾರ್ಟಂ ನಡೆದಿದ್ದರೂ 4.30 ಎಂದು ನಮೂದಿಸಿದ್ದೇಕೆ?
4) ಅನುರಾಗ್ ಮೃತಪಟ್ಟಾಗ ಧರಿಸಿದ್ದ ಬಟ್ಟೆಗಳು ಎಲ್ಲಿ?
5) ಬೆಳಗಿನ ಜಾವ ಮೃತಪಟ್ಟರೂ ಹೊಟ್ಟೆಯಲ್ಲಿನ ಆಹಾರ ಏಕೆ ಪಚನವಾಗಿಲ್ಲ?
6) ಅನುರಾಗ್ ತಿವಾರಿಯವರ ಸರ್ಕಾರಿ ಮೊಬೈಲ್ ಎಲ್ಲಿ?
7) ಅನುರಾಗ್ ಇದ್ದ ಗೆಸ್ಟ್'ಹೌಸ್'ನ ಮೇಲುಸ್ತುವಾರಿ ಹೊತ್ತಿದ್ದ ಅಧಿಕಾರಿ ಎಲ್ಲಿ?
8) ಮೇ.17ರ ಜೆಟ್ ಏರ್'ವೇಸ್ ಟಿಕೆಟ್ ಕ್ಯಾನ್ಸಲ್ ಮಾಡಿಸಿದ್ದು ಯಾರು?
9) ಮಧ್ಯರಾತ್ರಿ 1.15ಕ್ಕೆ ವಾಟ್ಸ್'ಆ್ಯಪ್ ನಂಬರ್ ಬದಲಾದದ್ದು ಏಕೆ?
10) ರೆಸ್ಟೋರೆಂಟ್'ನಲ್ಲಿ ಊಟ ಮುಗಿಸಿದ ನಂತರ ಅನುರಾಗ್ ಅವರು ಗೆಸ್ಟ್ಹೌಸ್'ಗೆ ಹೋಗಿದ್ರಾ?
ಪ್ರಕರಣದಲ್ಲಿ ಅನುಮಾನಗಳು:
1) ತಿವಾರಿಗೆ ನೀಡಲಾದ ರೆಸ್ಟೋರೆಂಟ್ ಆಹಾರ ಎಷ್ಟು ಸುರಕ್ಷಿತವಾಗಿತ್ತು? ತಿವಾರಿ ಸೇವಿಸಿದ್ದ ಆಹಾರದಲ್ಲಿ ವಿಷದ ಅಂಶವಿತ್ತೆ ? ವಿಷದಿಂದಾಗಿ ತಿವಾರಿ ಮೃತಪಟ್ಟರೇ ?
2) ವೈದ್ಯರ ವರದಿ ಪ್ರಕಾರ ಅನುರಾಗ್ ತಿವಾರಿ ಸಾವು ಮಧ್ಯರಾತ್ರಿ 2 ರಿಂದ 3 ಗಂಟೆಯೊಳಗೆ ಸಂಭವಿಸಿದೆ. ಹಾಗಿದ್ದರೆ ಬೆಳಗ್ಗೆ ಮೃತದೇಹ ರಸ್ತೆಬದಿಯಲ್ಲಿ ಪತ್ತೆಯಾಗಿದ್ದು ಹೇಗೆ?
3) ತಿವಾರಿ ಸತ್ತ ನಂತರ ಶವವನ್ನು ರಸ್ತೆ ಬದಿ ಎಸೆದು ಹೋದರಾ? ಹಾಗಿದ್ದರೆ, ಯಾರವರು ?
4) ತಿವಾರಿ ಉಸಿರುಗಟ್ಟಿ ಸತ್ತರೇ? ಉಸಿರುಗಟ್ಟಿಸಿ ಸಾಯಿಸಿದರೇ?
5) ಯಾವತ್ತೂ ಅನುರಾಗ್ ತಿವಾರಿ ವಾಕಿಂಗ್ ಹೋದವರಲ್ಲ ಎನ್ನುತ್ತಿದೆ ಕುಟುಂಬ. ವಾಯುವಿಹಾರದ ವೇಳೆ ಕುಸಿದು ಬಿದ್ದರು ಎಂಬ ಸುದ್ದಿ ಹರಡಿದ್ದು ಹೇಗೆ?
6) ಅನುರಾಗ್ ತಿವಾರಿಗೆ ಸಾವಿನ ಮುನ್ಸೂಚನೆ ಮೊದಲೇ ಸಿಕ್ಕಿತ್ತಾ? ಪ್ರಾಣಕ್ಕೆ ತೊಂದರೆ ಇದೆ ಎಂದು ಸೋದರನ ಜೊತೆ ವಾಟ್ಸ್'ಆ್ಯಪ್'ನಲ್ಲಿ ಹೇಳಿಕೊಂಡಿದ್ಯಾಕೆ? ಕುಟುಂಬದವರನ್ನು ಬೆಂಗಳೂರಿಗೆ ಬರಬೇಡಿ ಎಂದು ತಿವಾರಿ ಹೇಳಿದ್ಯಾಕೆ?
7) ರಾಜಕೀಯ ವ್ಯಕ್ತಿಗಳೊಂದಿಗೆ ಸಂಘರ್ಷ ಇತ್ತು ಎಂಬ ತಿವಾರಿ ಕುಟುಂಬದ ಆರೋಪ ಯಾಕೆ? ಆಹಾರ ಇಲಾಖೆ ಹಗರಣ ಬಯಲಿಗೆಳೆಯದಂತೆ ತಿವಾರಿ ಮೇಲೆ ಒತ್ತಡವಿತ್ತಾ?