ಜೋರಾಗಿದೆ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು: ಕುಂದಾನಗರಿಯಲ್ಲಿ ಧರ್ಮ ಹೋರಾಟಕ್ಕೆ ವೇದಿಕೆ ಸಜ್ಜು
ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಮಾನ್ಯತೆ ಕೂಗು ಎಲ್ಲೆಡೆ ಕೇಳಿಬರುತ್ತಿರುವ ಬೆನ್ನಲ್ಲೇ, ಮಹತ್ವದ ಸಮಾವೇಶವೊಂದಕ್ಕೆ ಕುಂದಾನಗರಿ ಸಜ್ಜಾಗಿದೆ. ಲಿಂಗಾಯತದ ಕಹಳೆ ಮೊಳಗಿಸಲು ಮಠಾಧೀಶರು ತೊಡೆತಟ್ಟಿ ನಿಂತಿದ್ದಾರೆ. ಲಿಂಗರಾಜ್ ಮೈದಾನದಲ್ಲಿ ಬೃಹತ್ ವೇದಿಕೆ ಸಜ್ಜಾಗಿದೆ.
ಬೆಳಗಾವಿ(ಆ.22): ರಾಜ್ಯದಲ್ಲಿ ಧರ್ಮಯುದ್ಧ ತಾರಕಕ್ಕೇರಿದೆ.. ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಬೇಡಿಕೆ ಹೆಚ್ಚಿದ ಬೆನ್ನಲ್ಲೇ ಇಂದು ಕುಂದಾನಗರಿ ಬೆಳಗಾವಿಯಲ್ಲಿ ಲಿಂಗಾಯತ ಬೃಹತ್ ಸಮಾವೇಶ ನಡೆಯುತ್ತಿದೆ. ಲಿಂಗರಾಜ್ ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆ ಸಿದ್ಧವಾಗಿದ್ದು, ವಿವಿಧ ಸ್ವಾಮೀಜಿಗಳು ಹಾಗೂ ಲಿಂಗಾಯತ ಸಮುದಾಯದ ಮುಖಂಡರು ಭಾಗವಹಿಸುತ್ತಿದ್ದಾರೆ.
ಕೇವಲ ಕರ್ನಾಟಕ ಮಾತ್ರವಲ್ಲ ಮಹಾರಾಷ್ಟ್ರ, ಕೇರಳ, ಆಂಧ್ರ ಸೇರಿದಂತೆ ವಿವಿಧ ಭಾಗಗಳಿಂದ ಸುಮಾರು ಮೂರು ಲಕ್ಷ ಕ್ಕಿಂತ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಲಿಂಗಾಯತ ಸ್ವತಂತ್ರ ಧರ್ಮದ ಮುಂದಿನ ಹೋರಾಟದ ಕುರಿತು ರೂಪು ರೇಷಗಳನ್ನು ಸಿದ್ಧಪಡಿಸಲಿದ್ದಾರೆ.
ಇನ್ನೂ ಸಮಾವೇಶಕ್ಕೆ ಆಗಮಿಸುವ ಕಾರ್ಯಕರ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದು.. ಸುಮಾರು ೩ ಕಡೆ ಅಡುಗೆ ವ್ಯವಸ್ಥೆ ಮಾಡಲಾಗಿದೆ. ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿದೆ.ಒಟ್ಟಾರೆ, ವೀರಶೈವ ಮತ್ತು ಲಿಂಗಾಯತರ ನಡುವಿನ ಧರ್ಮಯುದ್ಧ ಇವತ್ತು ಇನ್ನೊಂದು ಹಂತಕ್ಕೆ ತಲುಪುತ್ತಿದೆ. ಲಿಂಗಾಯತ ಪ್ರತ್ಯೇಕತೆಗೆ ಮಾನ್ಯತೆ ಸಿಗುತ್ತಾ ಕಾದು ನೋಡೋಣ.