ಹುಳಗಳು ಇರುವ ಅಕ್ಕಿ ನೀಡುತ್ತಿದ್ದ ನ್ಯಾಯಬೆಲೆ ಅಂಗಡಿ ಲೈಸನ್ಸ್ ರದ್ದು
ಸುವರ್ಣನ್ಯೂಸ್ ವರದಿ ಮಾಡಿದ ಬಳಿಕ ಅಧಿಕಾರಿಗಳು ನ್ಯಾಯಬೆಲೆ ಅಂಗಡಿಯ ಗುತ್ತಿಗೆದಾರ ಆರ್.ಎಂ ಪುಟ್ಟಿ ಅವರ ಲೈಸನ್ಸ್ ರದ್ದು ಮಾಡಿದ್ದಾರೆ.
ಗದಗ (ಮಾ.19): ಹಸಿದ ಹೊಟ್ಟೆಗೆ ಅನ್ನ ನೀಡಲು ಅನ್ನಭಾಗ್ಯದಂತಹ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಈ ಯೋಜನೆ ಸಿಎಂ ಸಿದ್ದರಾಮಯ್ಯ ಅವರ ಕನಸಿನ ಕೂಸು ಕೂಡ ಹೌದು.
ಆದರೆ ಅಧಿಕಾರಿಗಳ ಎಡವಟ್ಟಿನಿಂದ ಬಡವರಿಗೆ ಅನ್ನಭಾಗ್ಯದ ಜೊತೆ ಹುಳುಗಳ ಭಾಗ್ಯವೂ ಸಿಗುತ್ತಿದೆ. ಗದಗ- ಬೆಟಗೇರಿ ನ್ಯಾಯಬೆಲೆ ಅಂಗಡಿ ಸಂಖ್ಯೆ 46ರಲ್ಲಿ ಕಳಪೆ ಅಕ್ಕಿ ಪೂರೈಕೆಯಾಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಅನ್ನಭಾಗ್ಯಕ್ಕೆ ಪೂರೈಕೆಯಾದ ಅಕ್ಕಿ ತುಂಬಾ ಹುಳುಗಳು ತುಂಬಿಕೊಂಡಿದ್ದು, ಪೂರೈಕೆಯಾದ 125 ಕ್ವಿಂಟಲ್ ಅಕ್ಕಿಯೂ ಕಳಪೆಯಾಗಿದೆ ಎಂಬುವುದು ಸ್ಥಳೀಯರ ಆಕ್ರೋಶ.
ನ್ಯಾಯಬೆಲೆ ಅಂಗಡಿಯ ಲೈಸನ್ಸ್'ದಾರ ಆರ್.ಎಮ್.ಪುಟ್ಟಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಸುವರ್ಣನ್ಯೂಸ್ ವರದಿ ಮಾಡಿದ ಬಳಿಕ ಅಧಿಕಾರಿಗಳು ನ್ಯಾಯಬೆಲೆ ಅಂಗಡಿಯ ಗುತ್ತಿಗೆದಾರ ಆರ್.ಎಂ ಪುಟ್ಟಿ ಅವರ ಲೈಸನ್ಸ್ ರದ್ದು ಮಾಡಿದ್ದಾರೆ.
ನಂತರ ಅಲ್ಲಿರುವ ಎಲ್ಲಾ ಅಕ್ಕಿ ಮೂಟೆಗಳನ್ನು ಲಾರಿ ಮೂಲಕ ಮತ್ತೆ ಗೋದಾಮಿಗೆ ಸ್ಥಳಾಂತರಿಸಿದ್ದಾರೆ.