ಇಂದಿರಾಗರ ಸುತ್ತಮುತ್ತ ಇದೆ ಲೇಡೀಸ್ ಗ್ಯಾಂಗ್ಸ್; ಲೂಟಿ ಮಾಡಲು ಬಟ್ಟೆ ಬಿಚ್ಚಲೂ ರೆಡಿ ಈ ಹುಡ್ಗೀರು
ಮರ್ಯಾದೆ ಹೋಗುತ್ತದೆ ಎಂಬ ಕಾರಣಕ್ಕೆ ಇನ್ನೂ ಹಲವರು ದೂರು ನೀಡಲು ಮುಂದೆ ಬಂದಿಲ್ಲದೇ ಇರಬಹುದು ಎಂದು ಪೊಲೀಸರು ಹೇಳುತ್ತಾರೆ. ಪೂರ್ವ ವಿಭಾಗದ ಪೊಲೀಸರು ಈ ಖತರ್ನಾಕ್ ಲೇಡೀಸ್ ಗ್ಯಾಂಗ್'ಗಳನ್ನು ಹಿಡಿಯಲು ಬಲೆ ಬೀಸಿದ್ದಾರೆ. ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ರಾತ್ರಿಯ ಬೀಟ್'ಗೆ ಕಳುಹಿಸಲಾಗುತ್ತಿದೆ. ರಾತ್ರಿ ವೇಳೆ ಅನುಮಾನಾಸ್ಪದವಾಗಿ ಸಂಚರಿಸುವ ಹುಡುಗಿಯರ ಮೇಲೆ ಕಣ್ಣಿಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಬೆಂಗಳೂರು(ಏ. 04): ರಸ್ತೆಯಲ್ಲಿ ಹೋಗೋವಾಗ ಚೆಂದುಳ್ಳಿ ಚೆಲುವೆಯೊಬ್ಳು ಬಂದು ಮಾತನಾಡಿಸಿದಾಗ ಹಲ್ಲು ಕಿಸಿದು ಬಕರಾ ಅಗದಿರಿ. ನಿಮ್ಮಲ್ಲಿರೋದೆಲ್ಲವನ್ನೂ ದೋಚಲೆಂದು ಆಕೆ ಬಂದಿದ್ದಾಳು. ಈ ಮಾತು ಹೇಳಲು ಕಾರಣವೆಂದರೆ ಇತ್ತೀಚೆಗೆ ಬೆಳಕಿಗೆ ಬಂದ ಇಂದಿರಾ ನಗರ ದರೋಡೆ ಪ್ರಕರಣ. 31 ವರ್ಷದ ಉದ್ಯಮಿಯೊಬ್ಬನನ್ನು ಲೇಡೀಸ್ ಗ್ಯಾಂಗೊಂದು ದೋಚಿದ ಘಟನೆ ನಡೆದಿದೆ. ಇಂದಿರಾನಗರ, ಅಲಸೂರು, ಜೈಭೀಮಾನಗರ ಸುತ್ತಮುತ್ತ ಚೆಲುವೆಯರ ಗ್ಯಾಂಗು ಅಮಾಯಕ ಜನರನ್ನು ಲೂಟಿ ಮಾಡಿ ಅಟ್ಟಹಾಸ ನಡೆಸುತ್ತಿದೆ. ಕಳೆದ 2 ವಾರಗಳಿಂದ ಈ ಖತರ್ನಾಕ್ ಲೇಡೀಸ್ ಗ್ಯಾಂಗ್ ಇಲ್ಲಿ ಕಾರ್ಯನಿರ್ವಹಿಸುತ್ತಿದೆ.
ಚೆಲುವಿಯರ ಆಟ ಹೇಗಿರುತ್ತೆ?
ಪಬ್, ಪಾರ್ಟಿ ಮೊದಲಾದವು ಹೆಚ್ಚಾಗಿ ನಡೆಯುವ ರಾತ್ರಿಯ ಹೊತ್ತೇ ಈ ಸುಂದರಿಯರ ಆಟವಿರುತ್ತದೆ. ಕಾರಿನಲ್ಲಿ ಹೋಗುತ್ತಿರುವವರು, ಅಥವಾ ಮೈಮೇಲೆ ಒಡವೆ ಹಾಕಿಕೊಂಡು ನಡೆದು ಹೋಗುತ್ತಿರುವವರು ಲೇಡೀಸ್ ಗ್ಯಾಂಗ್'ನ ಟಾರ್ಗೆಟ್ ಆಗಿರುತ್ತದೆ. ಜನರಿಗೆ ಸೆಕ್ಸ್'ನ ಪ್ರಚೋದನೆ ಕೊಟ್ಟು ಪುಸಲಾಯಿಸಿ ನಿರ್ಜನ ಕತ್ತಲ ಜಾಗಕ್ಕೆ ಕರೆದೊಯ್ಯುತ್ತಾರೆ. ಅಲ್ಲಿ ಅವರನ್ನ ಅನೇಕ ವಿಧದಲ್ಲಿ ಹೆದರಿಸಿ ಹಣ ವಸೂಲಿ ಮಾಡಿ ಪರಾರಿಯಾಗುತ್ತಾರೆ. ಹಣ ಕೊಡಲು ಒಪ್ಪದಿದ್ದರೆ, ಬಟ್ಟೆ ಬಿಚ್ಚಿಕೊಂಡು ಕೂಗಿ ಹುಯಿಲೆಬ್ಬಿಸಲು ಯತ್ನಿಸುತ್ತಾರೆ. ಜನ ಹೆದರಿ ಹಣ ಕೊಟ್ಟು ಕೈತೊಳೆದುಕೊಳ್ಳುತ್ತಾರೆ.
ಮೊದಲ ಪ್ರಕರಣ:
31 ವರ್ಷದ ಎನ್.ಎಚ್.ಗೌಡ ಎಂಬುವವರು ರಾತ್ರಿ ಇಂದಿರಾನಗರದಲ್ಲಿ ಕಾರಿನಲ್ಲಿ ತಮ್ಮ ಮನೆಗೆ ಹೋಗುವಾಗ ಸಿಗ್ನಲ್'ನಲ್ಲಿ ಒಬ್ಬ ಹುಡುಗಿ ನಿಂತಿರುತ್ತಾಳೆ. ಕಾರಿನ ಎಡಬದಿಯಲ್ಲಿ ಅವರಿಗೆ ಆಕೆ ಅಶ್ಲೀಲ ಭಂಗಿ ಮೂಲಕ ಆಕರ್ಷಿಸಲು ಯತ್ನಿಸುತ್ತಾಳೆ. ಆತ ಏನಾಗುತ್ತಿದೆ ಎಂದು ಅರಿಯುವಷ್ಟರಲ್ಲಿ ಮತ್ತೊಬ್ಬ ಹುಡುಗಿ ಕಾರಿನ ಇನ್ನೊಂದು ಬದಿ ಮೂಲಕ ಒಳಗೆ ಬಂದು ಕೂರುತ್ತಾಳೆ. ಅಲ್ಲಿ ಆಕೆ ಗೌಡನ ಮೈಕೈ ಮುಟ್ಟಿ ಅಸಭ್ಯವಾಗಿ ವರ್ತಿಸುತ್ತಾಳೆ. ಸ್ವಲ್ಪ ದೂರ ಹೋದ ಬಳಿಕ ಗೌಡ ಆಕೆಯನ್ನು ಕಾರಿನಿಂದ ಕೆಳಗೆ ಇಳಿಸುತ್ತಾನೆ.
ಆದರೆ, ಆತ ಮನೆಗೆ ಹೋದಾಗ ತನ್ನ ಮೈಮೇಲಿದ್ದ ಚೈನು ಕಾಣೆಯಾಗಿರುವುದು ಗೊತ್ತಾಗುತ್ತದೆ. ಆ ಮಾದಕ ಚೆಲುವೆಯು ಈತನೊಂದಿಗೆ ಸಲುಗೆ ಮಾಡುವ ನೆಪದಲ್ಲಿ ಚಿನ್ನದ ಸರವನ್ನು ಲಪಟಾಯಿಸಿರುತ್ತಾಳೆ.
ಎರಡನೇ ಪ್ರಕರಣ:
ಮೊದಲ ಪ್ರಕರಣದಲ್ಲಿ ಮೋಸ ಹೋದ ಗೌಡ ಅವರ ಸ್ನೇಹಿತನೊಬ್ಬನಿಗೂ ಇಂಥದ್ದೇ ಅನುಭವವಾಗಿತ್ತಂತೆ. ಹಲಸೂರು ಬಳಿ ಆ ವ್ಯಕ್ತಿ ಕಾರನ್ನು ಹುಡುಗಿಯೊಬ್ಬಳು ಹತ್ತುತ್ತಾಳೆ. ನಂತರ ಆಕೆ ಏಕಾಏಕಿ ತನ್ನ ಬಟ್ಟೆ ಬಿಚ್ಚುತ್ತಾಳೆ. ತನಗೆ ಹಣ ಕೊಡದಿದ್ದರೆ ಕಿರುಚಿಕೊಳ್ಳುವುದಾಗಿ ಹೆದರಿಸುತ್ತಾಳೆ. ಭಯಪಟ್ಟ ಆ ವ್ಯಕ್ತಿಯು ತನ್ನ ಪರ್ಸ್ ಆಚೆ ತೆಗೆಯುತ್ತಲೇ, ಆ ಹುಡುಗಿ ಪರ್ಸ್ ಮತ್ತು ಮೊಬೈಲ್ ಕಿತ್ತುಕೊಂಡು ಪರಾರಿಯಾಗುತ್ತಾಳೆ.
ಮೂರನೇ ಪ್ರಕರಣ:
ಡಿಆರ್'ಡಿಓ ಸಿಬ್ಬಂದಿ 61 ವರ್ಷದ ಕೆಎಸ್ ಥಾಮಸ್ ಎಂಬುವವರು ನ್ಯೂ ತಿಪ್ಪಸಂದ್ರದ ವಿಶ್ವೇಶ್ವರಯ್ಯ ಪಾರ್ಕ್'ನಲ್ಲಿ ಬೆಳಗ್ಗೆ ಹೊತ್ತು ವಾಕಿಂಗ್ ಹೋಗುವಾಗ ಹೆಲ್ಮೆಟ್ ಧರಿಸಿದ ಹುಡುಗಿಯೊಬ್ಬಳು ಪ್ರತ್ಯಕ್ಷಳಾಗುತ್ತಾಳೆ. ತಾನು ಯಾರೆಂದು ಹೇಳಿ ಎಂದು ಕೇಳುತ್ತಾಳೆ. ಥಾಮಸ್'ಗೆ ಗೊಂದಲವಾಗಿ ಆಕೆಯ ಹೆಲ್ಮೆಟ್ ತೆಗೆಯಲು ಹೇಳುತ್ತಾರೆ. ತನ್ನನ್ನು ಯಾಕೆ ದುರುಗುಟ್ಟಿ ನೋಡುತ್ತಿದ್ದೀರಿ ಎಂದು ಆಕೆ ಇದ್ದಕ್ಕಿದ್ದಂತೆ ಕಿರುಚಿ ಹೇಳತೊಡಗುತ್ತಾಳೆ. ಕೈಲಿದ್ದ ಚಿನ್ನ ಮತ್ತು ಹಣವನ್ನು ತನಗೆ ನೀಡದಿದ್ದರೆ ಎಲ್ಲರನ್ನೂ ಸೇರಿಸುತ್ತೇನೆ ಎಂದು ಬೆದರಿಸುತ್ತಾಳೆ. ಥಾಮಸ್ ಬೇರೆ ವಿಧಿಯಿಲ್ಲದೆ 3 ಸಾವಿರ ಹಣ ಮತ್ತು ಚಿನ್ನದ ಉಂಗುರ ಕೊಟ್ಟುಬಿಡುತ್ತಾರೆ.
ಈ ಮೇಲಿನ ಮೂರು ಪ್ರಕರಣಗಳು ಸದ್ಯ ಬೆಳಕಿಗೆ ಬಂದಿರುವಂಥದ್ದು. ಮರ್ಯಾದೆ ಹೋಗುತ್ತದೆ ಎಂಬ ಕಾರಣಕ್ಕೆ ಇನ್ನೂ ಹಲವರು ದೂರು ನೀಡಲು ಮುಂದೆ ಬಂದಿಲ್ಲದೇ ಇರಬಹುದು ಎಂದು ಪೊಲೀಸರು ಹೇಳುತ್ತಾರೆ. ಪೂರ್ವ ವಿಭಾಗದ ಪೊಲೀಸರು ಈ ಖತರ್ನಾಕ್ ಲೇಡೀಸ್ ಗ್ಯಾಂಗ್'ಗಳನ್ನು ಹಿಡಿಯಲು ಬಲೆ ಬೀಸಿದ್ದಾರೆ. ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ರಾತ್ರಿಯ ಬೀಟ್'ಗೆ ಕಳುಹಿಸಲಾಗುತ್ತಿದೆ. ರಾತ್ರಿ ವೇಳೆ ಅನುಮಾನಾಸ್ಪದವಾಗಿ ಸಂಚರಿಸುವ ಹುಡುಗಿಯರ ಮೇಲೆ ಕಣ್ಣಿಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.