ಬರಿದಾದ ಕೆಆರ್`ಎಸ್.. 47 ವರ್ಷಗಳ ಬಳಿಕ ಕಾಣುತ್ತಿದೆ ಕನ್ನಂಬಾಡಿ ಕಟ್ಟೆಯ ತಳ
ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡಲು ಮುಂದಾದ ಸರಕಾರ ತಮಿಳುನಾಡಿಗೆ ನೀರು ಹರಿಸಿದ್ದರಿಂದ ಈ ಸ್ಥಿತಿ
ಮಂಡ್ಯ(ಸೆ.27): ನಾಡಿನ ಜೀವನಾಡಿ ಕಾವೇರಿ ನದಿಯ ಕೆಆರ್ಎಸ್ ಜಲಾಶಯ ಹಿಂದೆದೂ ಕಾಣದ ರೀತಿ ಬರಿದಾಗಿದೆ. 49.45 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ ಇರೋದು ಕೇವಲ 10.2 ಟಿಎಂಸಿ ನೀರು. ಕಳೆದ 47 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕೆಆರ್ಎಸ್ನ ನೀರಿನ ಮಟ್ಟ ತಳಕಂಡಿದೆ. 1969ರಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದಾಗ ಹತ್ತು ಟಿಎಂಸಿಯಷ್ಟು ನೀರು ಇತ್ತು. ಈಗ ಇಂಥದ್ದೇ ಸ್ಥಿತಿ ಮರುಕಳಿಸಿದೆ.
ಸುಪ್ರೀಂ ಆದೇಶ ಪಾಲಿಸಿದ್ದಕ್ಕೆ ಈ ಸ್ಥಿತಿ: ಸುಪ್ರೀಂ ಕೋರ್ಟ್ ಆದೇಶ ಮತ್ತು ಕಾವೇರಿ ಉಸ್ತುವಾರಿ ಸಮಿತಿ ಆದೇಶ ಪಾಲನೆ ಮಾಡಲು ಮುಂದಾದ ಸರಕಾರ ತಮಿಳುನಾಡಿಗೆ ನೀರು ಹರಿಸಿದ್ದರಿಂದ ಈ ಸ್ಥಿತಿ ಬಂದಿದೆ. ಈಗ ಉಳಿದಿರುವ ನೀರನ್ನು ಮುಂದಿನ ವರ್ಷದ ಜೂನ್ವರೆಗೆ ಕುಡಿಯುವ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಬೇಕಾಗಿದೆ. ಹಿಂಗಾರು ಮಳೆ ಕೈಕೊಟ್ಟರೆ ಕಾವೇರಿಯನ್ನೇ ಅವಲಂಭಿಸಿರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜಲಕ್ಷಾಮ ಎದುರಾಗಲಿದೆ. ಬೆಂಗಳೂರು, ಮೈಸೂರು ಮತ್ತಿತರ ನಗರಗಳಿಗೆ ಕುಡಿಯುವ ಉದ್ದೇಶಕ್ಕಾಗಿ ತಿಂಗಳಿಗೆ 2 ಟಿಎಂಸಿಯಷ್ಟು ನೀರು ಅಗತ್ಯವಿದೆ. ಸದ್ಯ ಜಲಾಶಯದ ಒಳಹರಿವು 1185 ಕ್ಯೂಸೆಕ್ನಷ್ಟಿದ್ದು, ಹೊರ ಹರಿವು 200 ಕ್ಯೂಸೆಕ್ನಷ್ಟಿದೆ.
KRSನಿಂದ ನೀರು ಬಿಡದಿದ್ದರೂ, ತಮಿಳುನಾಡಿಗೆ ಹರಿಯಿತು ನೀರು: ಎಸ್.. ಕೆಆರ್ಎಸ್ ನಿಂದ ನೀರು ಬಿಟ್ಟಿಲ್ಲ. ಆದ್ರೂ ತಮಿಳುನಾಡಿಗೆ ನೀರು ಹರಿದಿದೆ. ಕಳೆದ ಐದಾರು ದಿನಗಳಿಂದ ಕೆ.ಆರ್.ಎಸ್ ನಿಂದ ಬಿಳಿಗುಂಡ್ಲು ಮಧ್ಯೆ ಸುರಿದ ಮಳೆಯಿಂದಾಗಿ,ತಮಿಳುನಾಡಿಗೆ 14 ಸಾವಿರ ಕ್ಯೂಸೆಕ್ ನೀರು ಹರಿದಿದೆ.