ರಾಜ್ಯದ ಮುಂದಿನ ಸಿಎಂ ಡಿಕೆಶಿ: ಕೇಂದ್ರ ಮಾಜಿ ಸಚಿವ ಭವಿಷ್ಯ
ಇಂಥ ಸಂದರ್ಭದಲ್ಲಿ ಸಿದ್ದರಾಮಯ್ಯ ರಾಜಿನಾಮೆ ನೀಡಿದರೆ ಮಾತ್ರ ಕಾಂಗ್ರೆಸ್ ಉಳಿಯುತ್ತದೆ. ಮುಂದಿನ ಮುಖ್ಯಮಂತ್ರಿಯನ್ನಾಗಿ ದಲಿತರನ್ನು ಮಾಡಲು ಹೈಕಮಾಂಡ್ಗೆ ಮನಸ್ಸಿಲ್ಲವಾದರೆ ಡಿ.ಕೆ.ಶಿವಕುಮಾರ್ ಅವರನ್ನೇ ಮಾಡಲಿ
ಮಂಗಳೂರು(ಆ.13):‘‘ರಾಜ್ಯದ ಮುಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೊರತು ಸಿದ್ದರಾಮಯ್ಯ ಅಲ್ಲ, ಡಿ.ಕೆ. ಶಿವಕುಮಾರ್’’ ಇದು ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರು ಹೇಳಿದ ಭವಿಷ್ಯ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿ.ಕೆ. ಶಿವಕುಮಾರ್ ಪ್ರಬಲರಾಗುತ್ತಿದ್ದಾರೆ. ಅವರ ಮೇಲೆ ಹೈಕಮಾಂಡ್ ಉತ್ತಮ ಅಭಿಪ್ರಾಯವನ್ನೂ ಹೊಂದಿದ್ದು ಕಾಂಗ್ರೆಸ್ನ ಕಷ್ಟ ಕಾಲದಲ್ಲಿ ಪಕ್ಷದ ಪರ ನಿಂತ ಅವರು ಭಾವಿ ಸಿಎಂ ಆಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ ಎಂದು ಅಭಿಪ್ರಾಯಪಟ್ಟರು.
ಬರಪೀಡಿತ ಜನರ ಬಳಿ ಹೋಗಲು ಸಾಧ್ಯವಾಗದ ಸಿದ್ದರಾಮಯ್ಯ ಅವರು ರಾಜಿನಾಮೆ ನೀಡುವಂತೆ ಒತ್ತಾಯಿಸಿದ ಪೂಜಾರಿ, ‘‘ಹಗಲಲ್ಲಿ ಹೋಗಲು ಸಮಯವಿಲ್ಲವಾದರೆ ರಾತ್ರಿ ಏನು ಮಾಡುತ್ತೀರಿ? ಇಸ್ಪೀಟ್ ಆಡುತ್ತೀರಾ ಅಥವಾ ಬೇರೆ ಏನಾದರೂ ಅಭ್ಯಾಸ ಇದೆಯೇ?’’ ಎಂದು ಟೀಕಿಸಿದರು.
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಾಜ್ಯ ಪ್ರವಾಸಕ್ಕೆ ಹೊರಟಿರುವುದು ಮುಖ್ಯಮಂತ್ರಿಯನ್ನು ಕೆಳಗಿಳಿಸಲಿಕ್ಕೆ ಎನ್ನುವುದನ್ನು ನೆನಪಿಡಿ. ಅವರು ಹೋದ 18 ರಾಜ್ಯಗಳಲ್ಲಿ ಅಲ್ಲಿನ ಮುಖ್ಯಮಂತ್ರಿಗಳನ್ನು ಅಧಿಕಾರದಿಂದ ಇಳಿಸಿದ್ದಾರೆ. ಇಂಥ ಸಂದರ್ಭದಲ್ಲಿ ಸಿದ್ದರಾಮಯ್ಯ ರಾಜಿನಾಮೆ ನೀಡಿದರೆ ಮಾತ್ರ ಕಾಂಗ್ರೆಸ್ ಉಳಿಯುತ್ತದೆ. ಮುಂದಿನ ಮುಖ್ಯಮಂತ್ರಿಯನ್ನಾಗಿ ದಲಿತರನ್ನು ಮಾಡಲು ಹೈಕಮಾಂಡ್ಗೆ ಮನಸ್ಸಿಲ್ಲವಾದರೆ ಡಿ.ಕೆ.ಶಿವಕುಮಾರ್ ಅವರನ್ನೇ ಮಾಡಲಿ ಎಂದು ಪೂಜಾರಿ ಹೇಳಿದರು.
ಶಾಲೆ ದತ್ತು ರದ್ದು ಅಕ್ಷಮ್ಯ:
ಕಲ್ಲಡ್ಕ ಮತ್ತು ಪುಣಚ ಶಾಲೆಗಳಿಗೆ ಕೊಲ್ಲೂರು ದೇವಾಲಯದಿಂದ ದತ್ತು ಯೋಜನೆ ನಿಲ್ಲಿಸಿದ್ದು ಅಕ್ಷಮ್ಯ. ಮಕ್ಕಳಿಗೆ ಊಟ ನೀಡುವುದು ಪುಣ್ಯದ ಕೆಲಸ. ಅದನ್ನು ನಿಲ್ಲಿಸುವವರು ರಾಕ್ಷಸರು. ಕೂಡಲೇ ಸಚಿವ ರಮಾನಾಥ ರೈ ಅವರು ಮುಖ್ಯಮಂತ್ರಿ ಬಳಿ ಈ ದತ್ತು ಯೋಜನೆ ಮುಂದುವರಿಸಲು ಮನವಿ ಮಾಡಬೇಕು ಎಂದು ಪೂಜಾರಿ ಒತ್ತಾಯಿಸಿದರು.