ಅಪ್ಪ ರೇಪ್ ಮಾಡಿದ್ದಾನೆ ಎಂದರೂ ಜ್ಯೋತಿಷಿ ಮೊರೆ ಹೋದ ತಾಯಿ
ಹೆತ್ತ ತಂದೆಯೇ ಮಗಳ ಮೇಲೆ ನಿರಂತರ ಅತ್ಯಾಚಾರವೆಸಗಿದ್ದಾನೆ. ಆದ್ರೆ ಇದನ್ನ ನಂಬದ ತಾಯಿ, ತನ್ನ ಅನುಮಾನವನ್ನ ಪರಿಹಾರ ಮಾಡ್ಕೊಳ್ಳೋದಕ್ಕೆ ಜ್ಯೋತಿಷಿಯ ಮೊರೆ ಹೋಗಿದ್ದಾಳೆ. ಇಂತಹದೊಂದು ವಿಚಿತ್ರ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು: ತಂದೆ - ಮಗಳ ಬಾಂಧವ್ಯ ವಿಶೇಷವಾದದ್ದು, ಆದ್ರೆ ಇಲ್ಲೊಬ್ಬ ಪಾಪಿ ತಂದೆ ತನ್ನ ಸ್ವಂತ ಮಗಳ ಮೇಲೆಯೇ ನಿರಂತರವಾಗಿ ಅತ್ಯಾಚಾರ ನಡೆಸಿದ್ದಾನೆ. ಸತ್ಯ ಬಾಯಿ ಬಿಟ್ರೆ ತಾಯಿಯನ್ನ ಕೊಂದು ಹಾಕ್ತೀನಿ ಅಂತಾ ಬೆದರಿಕೆ ಹಾಕಿದ್ದಾನೆ. ಇಂತಹದೊಂದು ಮಾನಗೇಡಿ ಕೃತ್ಯ ಮಾಗಡಿಯ ಅಜ್ಜನಹಳ್ಳಿಯಲ್ಲಿ ನಡೆದಿದೆ.
ರಮೇಶ್ ಎಂಬಾತನೇ ಆರೋಪಿ. ತಾಯಿ ಮೇಲಿನ ಪ್ರೀತಿಯಿಂದ ಈ ಹೆತ್ತಪ್ಪನ ಅನಾಚಾರವನ್ನ ಮಗಳು ಮುಚ್ಚಿಟ್ಟಿರುತ್ತಾಳೆ. ಅಪ್ಪನ ವಿಕೃತಿ ಮಿತಿಮೀರಿದ್ದರಿಂದ ಸತ್ಯ ಬಾಯ್ಬಿಟ್ಟಿದ್ದಾಳೆ. ಆದ್ರೆ ಮಗಳು ಹೇಳ್ತಿರೋದು ಸುಳ್ಳು ಎಂದು ರಮೇಶ್ ವಾದಿಸುತ್ತಾನೆ. ಬೇಕಾದ್ರೆ ಪೂಜಾರಪ್ಪನ ಬಳಿ ಹೋಗೋಣ ಎಂದು ಹೇಳುತ್ತಾನೆ. ಮುಗ್ಧ ತಾಯಿ ಒಪ್ಪಿಕೊಳ್ಳುತ್ತಾರೆ. ಮಲ್ಲೇಶ್ ಎಂಬ ಪೂಜಾರಿ ಬಳಿ ಸತ್ಯಾಸತ್ಯತೆ ತಿಳಿಯುಲು ಹೋಗುತ್ತಾರೆ.
ಇಲ್ಲಿ ಪೂಜಾರಪ್ಪ ಹಣಕ್ಕಾಗಿ ನಾಟಕ ಆಡುತ್ತಾನೆ. ಚೌಡೇಶ್ವರಿ ನಗರದಲ್ಲಿರುವ ಕಳ್ಳ ಪೂಜಾರಿ ಮಲ್ಲೇಶ್ ದಂಪತಿಯು, ಯುವತಿಯನ್ನ ಮುಳ್ಳಿನ ಮೇಲೆ ಮಲಗಿಸಿದಾಗ ರಕ್ತ ಬಂದರೆ ರೇಪ್ ಆಗಿಲ್ಲ, ಬರಲಿಲ್ಲಾಂದ್ರೆ ರೇಪ್ ಆಗಿದೆ ಎಂದರ್ಥ ಎಂದು ಹೇಳುತ್ತಾನೆ. ಅದರಂತೇ ಮಗಳನ್ನ ಪೂಜಾರಿ ಮನೆಗೆ ಕರೆತಂದಿದ್ದು, ಮಲ್ಲೇಶ್ ಪತ್ನಿ ನೊಂದ ಯುವತಿಯನ್ನ ಮುಳ್ಳಿನ ಮೇಲೆ ಮಲಗಿಸಿ ಹಿಂಸಿಸಿದ್ದಾಳೆ. ಆದ್ರೆ, ಈ ವಿಚಾರ ತಿಳಿದ ಸಾರ್ವಜನಿಕರು ಪೂಜಾರಿ ಮನೆಗೆ ನುಗ್ಗಿ ಮಲ್ಲೇಶ್ ದಂಪತಿ ಮತ್ತು ತಂದೆ ರಮೇಶ್'ನನ್ನು ರಾಜಗೋಪಾಲ್'ನಗರ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಮೊದಲೇ ತಂದೆಯ ಪಾಪ ಕೃತ್ಯದಿಂದ ನೊಂದಿದ್ದ ಯುವತಿಗೆ, ಹಣದಾಸೆಗೆ ಬಿದ್ದ ಪೂಜಾರಿ ದಂಪತಿ ಮತ್ತಷ್ಟು ಹಿಂಸೆ ನೀಡಿದ್ದಾರೆ. ಆದ್ರೆ ಮಗಳ ಹಿತ ಬಯಸುವ ತಾಯಿಯು ಪುಜಾರಿಯ ಬೊಗಳೆ ಮಾತನ್ನ ಒಪ್ಪಿಕೊಂಡು ಮಗಳನ್ನ ಮುಳ್ಳಿನ ಹಾಸಿಗೆಯಲ್ಲಿ ಮಲಗಿಸಲು ಹೋಗಿದ್ದ ಮುಗ್ಧತೆ ನೋಡಿದ್ರೆ ನಿಜಕ್ಕೂ ಬೇಸರವಾಗುತ್ತಿದೆ.
- ಅಭಿಷೇಕ್ ಜೈಶಂಕರ್, ಕ್ರೈಂ ಬ್ಯೂರೋ, ಸುವರ್ಣ ನ್ಯೂಸ್