ಉಪರಾಷ್ಟ್ರಪತಿ ರೇಸ್'ನಲ್ಲಿ ಬಿಜೆಪಿಯಿಂದ ವೆಂಕಯ್ಯ ನಾಯ್ಡು ಜೊತೆ ಕರ್ನಾಟಕದ ಮತ್ತೊಬ್ಬ ನಾಯಕನ ಹೆಸರು
ರಾಷ್ಟ್ರಪತಿ ಸ್ಥಾನವು ಉತ್ತರಭಾರತೀಯರಾದ ರಾಮನಾಥ್ ಕೋವಿಂದ್ ಅವರ ಪಾಲಾಗವುದು ನಿಶ್ಚಿತವಾಗಿದೆ. ಹೀಗಾಗಿ, ದಕ್ಷಿಣ ಭಾರತೀಯರೊಬ್ಬರಿಗೆ ಉಪರಾಷ್ಟ್ರಪತಿ ಸ್ಥಾನ ನೀಡಿ ಬ್ಯಾಲೆನ್ಸ್ ಮಾಡುವುದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪ್ಲಾನ್.
ನವದೆಹಲಿ(ಜುಲೈ 17): ರಾಷ್ಟ್ರಪತಿ ಆಯ್ಕೆ ತಾನಂದುಕೊಂಡಂತೇ ಆಗುತ್ತಿರುವ ಹಿನ್ನೆಲೆಯಲ್ಲಿ ಎನ್'ಡಿಎ ಮೈತ್ರಕೂಟವು ಉಪರಾಷ್ಟ್ರಪತಿ ಸ್ಥಾನಕ್ಕೂ ತನ್ನ ಅಭ್ಯರ್ಥಿಯನ್ನೇ ಗೆಲ್ಲಿಸಲು ಪಣತೊಟ್ಟಿದೆ. ಉಪರಾಷ್ಟ್ರಪತಿ ಸ್ಥಾನಕ್ಕೆ ಎನ್'ಡಿಎಯಿಂದ ಇಬ್ಬರು ರೇಸ್'ನಲ್ಲಿರುವುದು ತಿಳಿದುಬಂದಿದೆ. ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹಾಗೂ ಕರ್ನಾಟಕ ವಿಧಾನಪರಿಷತ್ ಸಭಾಪತಿ ಡಿಎಚ್ ಶಂಕರಮೂರ್ತಿ ಅವರ ಹೆಸರುಗಳು ಉಪರಾಷ್ಟ್ರಪತಿ ಸ್ಥಾನದ ರೇಸ್'ಗೆ ಕೇಳಿಬರುತ್ತಿದೆ.
ದಕ್ಷಿಣದ ಕಾರ್ಡ್:
ರಾಷ್ಟ್ರಪತಿ ಸ್ಥಾನವು ಉತ್ತರಭಾರತೀಯರಾದ ರಾಮನಾಥ್ ಕೋವಿಂದ್ ಅವರ ಪಾಲಾಗವುದು ನಿಶ್ಚಿತವಾಗಿದೆ. ಹೀಗಾಗಿ, ದಕ್ಷಿಣ ಭಾರತೀಯರೊಬ್ಬರಿಗೆ ಉಪರಾಷ್ಟ್ರಪತಿ ಸ್ಥಾನ ನೀಡಿ ಬ್ಯಾಲೆನ್ಸ್ ಮಾಡುವುದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪ್ಲಾನ್.
ಉಪರಾಷ್ಟ್ರಪತಿ ಸ್ಥಾನ ಬಿಜೆಪಿಗೆ ಬಹಳ ಮುಖ್ಯ:
ಕೇಂದ್ರದಲ್ಲಿ ಅಧಿಕಾರದಲ್ಲಿರುವ ತಾನು ಮಾಡುವ ಅನೇಕ ಮಸೂದೆಗಳಿಗೆ ರಾಜ್ಯಸಭೆಯಲ್ಲಿ ಒಪ್ಪಿಗೆ ಪಡೆಯಲು ಬಿಜೆಪಿ ಸಾಹಸ ಪಡಬೇಕಿದೆ. ರಾಜ್ಯಸಭೆಯಲ್ಲಿ ಬಿಜೆಪಿಗೆ ಬಹುಮತದ ಕೊರತೆ ಇದೆ. ಅಲ್ಲಿ ಎನ್'ಡಿಎ ಹಾಗೂ ಇತರ ಮಿತ್ರ ಪಕ್ಷಗಳ ಸದಸ್ಯರ ಸಂಖ್ಯೆ 74 ಇದ್ದರೆ, ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳ ಸಂಖ್ಯೆ 171 ಇದೆ. ಹೀಗಾಗಿ, ತಮ್ಮ ಕಡೆಯಿಂದ ಸೂಕ್ತ ವ್ಯಕ್ತಿಯು ಉಪ ರಾಷ್ಟ್ರಪತಿಯಾದರೆ, ಅದು ಬಿಜೆಪಿಯ ರಾಜ್ಯಸಭೆಯ ಸಮಸ್ಯೆಗೂ ಪರಿಹಾರ ಸಿಕ್ಕಂತಾಗುತ್ತದೆ ಎಂಬ ಇರಾದೆಯೂ ಪಕ್ಷದೊಳಗಿದೆ ಎಂದು ಹೇಳಲಾಗಿದೆ. ಕಾಂಗ್ರೆಸ್'ನ ಹಮೀದ್ ಅನ್ಸಾರಿ ಅವರು ಹಾಲಿ ಉಪರಾಷ್ಟ್ರಪತಿಯಾಗಿದ್ದಾರೆ.
ಆಗಸ್ಟ್ 7ರಂದು ನೂತನ ಉಪರಾಷ್ಟ್ರಪತಿ ಆಯ್ಕೆಗೆ ಚುನಾವಣೆ ನಡೆಯಲಿದೆ.