8 ಮಸೂದೆಗಳಿಗೆ ಬೇಗ ಒಪ್ಪಿಗೆ ಕೊಡಿ: ಮೋದಿಗೆ ಸಿಎಂ ಪತ್ರ
ಕರ್ನಾಟಕ ಭೂ ಸುಧಾರಣೆ (ತಿದ್ದುಪಡಿ) ಮಸೂದೆ 2016, ಕನಿಷ್ಠ ವೇತನ (ಕರ್ನಾಟಕ ತಿದ್ದುಪಡಿ) ಮಸೂದೆ 2017 ಸೇರಿದಂತೆ ಕೇಂದ್ರ ಗೃಹ ಸಚಿವಾಲಯದ ಪರಿಶೀಲನೆಯಲ್ಲಿರುವ ಎಂಟು ಮಸೂದೆಗಳಿಗೆ ಶೀಘ್ರವಾಗಿ ಒಪ್ಪಿಗೆ ನೀಡಿ ರಾಷ್ಟ್ರಪತಿಗಳ ಅಂಕಿತಕ್ಕೆ ರವಾನಿಸಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಬೆಂಗಳೂರು: ಕರ್ನಾಟಕ ಭೂ ಸುಧಾರಣೆ (ತಿದ್ದುಪಡಿ) ಮಸೂದೆ 2016, ಕನಿಷ್ಠ ವೇತನ (ಕರ್ನಾಟಕ ತಿದ್ದುಪಡಿ) ಮಸೂದೆ 2017 ಸೇರಿದಂತೆ ಕೇಂದ್ರ ಗೃಹ ಸಚಿವಾಲಯದ ಪರಿಶೀಲನೆಯಲ್ಲಿರುವ ಎಂಟು ಮಸೂದೆಗಳಿಗೆ ಶೀಘ್ರವಾಗಿ ಒಪ್ಪಿಗೆ ನೀಡಿ ರಾಷ್ಟ್ರಪತಿಗಳ ಅಂಕಿತಕ್ಕೆ ರವಾನಿಸಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಈ ಕುರಿತು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಅವರು, ಎಂಟು ಮಸೂದೆಗಳಿಗೆ ರಾಜ್ಯದ ಉಭಯ ಸದನಗಳು ಒಪ್ಪಿಗೆ ನೀಡಿದ ನಂತರ ಪರಿಶೀಲನೆಗೆ ಕೇಂದ್ರ ಗೃಹ ಇಲಾಖೆಗೆ ಕಳುಹಿಸಲಾಗಿದೆ. ಮಸೂದೆ ಕುರಿತಂತೆ ಗೃಹ ಇಲಾಖೆ ಕೇಳಿರುವ ಎಲ್ಲ ಸ್ಪಷ್ಟನೆಗಳಿಗೆ ಸರ್ಕಾರ ಸಾಕಷ್ಟು ಮಾಹಿತಿ ನೀಡಿದೆ. ಆದರೂ ಈವರೆಗೆ ಗೃಹ ಇಲಾಖೆ ತನ್ನ ಒಪ್ಪಿಗೆಯನ್ನು ಸೂಚಿಸಿಲ್ಲ. ಜನರ ಹಿತದ ದೃಷ್ಟಿಯಿಂದ ಎಂಟು ಮಸೂದೆಗಳು ಕಾಯ್ದೆ ಆಗಲು ರಾಷ್ಟ್ರಪತಿಗಳ ಅಂಕಿತ ಅಗತ್ಯವಾಗಿದೆ. ಹೀಗಾಗಿ ಶೀಘ್ರ ರಾಷ್ಟ್ರಪತಿಗಳ ಅಂಕಿತ ದೊರೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಿದ್ದರಾ ಮಯ್ಯ ಪತ್ರದಲ್ಲಿ ಕೋರಿದ್ದಾರೆ.
ಮಾದಕ ವಸ್ತುಗಳ ಮಾರಾಟ ಗಾರರು, ಜೂಜುಕೋರರು, ಗೂಂಡಾಗಳು, ಕೊಳೆಗೇರಿ ಪ್ರದೇಶ ಒತ್ತುವರಿ ಮಾಡುವವರು, ಆಡಿಯೋ, ವಿಡಿಯೋ ನಕಲು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬಹುದಾದ 2014ರ ತಿದ್ದುಪಡಿ ಮಸೂದೆ, ಕರ್ನಾಟಕ ಸಮುದ್ರ ತೀರ ಮಂಡಳಿ ಮಸೂದೆ- 2015 ಬಹಳ ಕಾಲದಿಂದ ಗೃಹ ಇಲಾಖೆಯಿಂದ ಒಪ್ಪಿಗೆ ದೊರೆತಿಲ್ಲ ಎಂದು ಸಿದ್ದರಾಮಯ್ಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.