ಎಚ್ಡಿಕೆ ನಂಬಿ ರಾಜಕೀಯಕ್ಕೆ ಬಂದಿಲ್ಲ
ಆ ಪಕ್ಷದಲ್ಲಿ ಗೌಡರ ಕುಟುಂಬದ ಹೊರತು ಅಲ್ಪಸಂಖ್ಯಾತರು ಮತ್ತು ಇತರೆ ವರ್ಗದ ನಾಯಕರ ಬೆಳವಣಿಗೆಗೆ ಅವಕಾಶ ಇಲ್ಲ. ಜಾತ್ಯತೀತ ತತ್ವಕ್ಕೆ ಬದ್ಧವಾಗಿರುವ ಕಾಂಗ್ರೆಸ್ ಸೇರಿದ್ದರಿಂದಲೇ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದರು
ರಾಮನಗರ(ಫೆ.27):ಕುಮಾರಸ್ವಾಮಿ ಅವರು ನನ್ನ ಹಣೆ ಬರಹ ಬರೆಯುತ್ತಾರೆಂದು ನಂಬಿ ರಾಜಕೀಯಕ್ಕೆ ಬಂದಿಲ್ಲ. ಅವರ ಹಂಗಿನಲ್ಲಿ ರಾಜಕಾರಣ ಮಾಡುವ ಪ್ರಮೇಯವೂ ನನಗಿಲ್ಲ ಎಂದು ಜೆಡಿಎಸ್ ಭಿನ್ನಮತೀಯ ಶಾಸಕ ಜಮೀರ್ ಅಹಮದ್ ಖಾನ್ ವಾಗ್ದಾಳಿ ನಡೆಸಿದ್ದಾರೆ.
ಇಲ್ಲಿನ ಯಾರಬ್ನಗರದ ನೂರಾನಿ ಮಸೀದಿ ಬಳಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ನಾನು ಮತ್ತು ನನ್ನ ಸ್ನೇಹಿತರು ಜೆಡಿಎಸ್ನಲ್ಲೇ ಉಳಿದುಕೊಳ್ಳುವ ನಿರ್ಧಾರ ಮಾಡಿದ್ದೆವು. ಆದರೆ, ನಮ್ಮಿಂದ ಎಲ್ಲಾ ಲಾಭ ಪಡೆದ ದೇವೇಗೌಡ ಮತ್ತು ಕುಮಾರಸ್ವಾಮಿ ‘ಲೂಸ್ ಟಾಕ್’(ಹಗುರ ಮಾತು) ಆರಂಭಿಸಿದರು. ನಾವು ಬೇರೆಯವರಂತೆ ಮೈಮೇಲೆ ಬಿದ್ದು ಪಕ್ಷದಲ್ಲೇ ಉಳಿಸಿಕೊಳ್ಳಿ ಎಂದು ಅಂಗಲಾಚುವವರಲ್ಲ. ನಮಗೂ ಸ್ವಂತಿಕೆ ಇದೆ. ಅದರ ಮೇಲೆಯೇ ರಾಜಕಾರಣ ಮಾಡುತ್ತೇವೆ ಎಂದರು.
ಆ ಪಕ್ಷದಲ್ಲಿ ಗೌಡರ ಕುಟುಂಬದ ಹೊರತು ಅಲ್ಪಸಂಖ್ಯಾತರು ಮತ್ತು ಇತರೆ ವರ್ಗದ ನಾಯಕರ ಬೆಳವಣಿಗೆಗೆ ಅವಕಾಶ ಇಲ್ಲ. ಜಾತ್ಯತೀತ ತತ್ವಕ್ಕೆ ಬದ್ಧವಾಗಿರುವ ಕಾಂಗ್ರೆಸ್ ಸೇರಿದ್ದರಿಂದಲೇ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದರು ಎಂದು ಹೇಳಿದರು.