ಬಾಬ್ರಿ ಮಸೀದಿ ಪ್ರಕರಣ: ಆಡ್ವಾಣಿ, ಜೋಷಿ, ಉಮಾ ಭಾರತಿಗೆ ಜಾಮೀನು
ಮಾಜಿ ಉಪ ಪ್ರಧಾನಿ ಎಲ್.ಕೆ.ಆಡ್ವಾಣಿ ಕಳೆದ 25 ವರ್ಷಗಳಲ್ಲಿ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು ಇದು ಎರಡನೇ ಬಾರಿಗೆ. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಬಾಬ್ರಿ ಪ್ರಕರಣದಲ್ಲಿ ಎಲ್ಲಾ 12 ಆರೋಪಿಗಳ ವಿರುದ್ಧ ವಿಚಾರಣೆ ನಡೆಯಲಿದೆ. ಆರೋಪಿಗಳ ವಿರುದ್ಧ 1 ತಿಂಗಳಲ್ಲಿ ಚಾರ್ಜ್'ಶೀಟ್ ಫೈಲ್ ಮಾಡುವಂತೆ ಸಿಬಿಐ ನ್ಯಾಯಾಲಯಕ್ಕೆ ಸುಪ್ರೀಂ ನಿರ್ದೇಶನ ನೀಡಿತ್ತು. ಅಷ್ಟೇ ಅಲ್ಲ, 2 ವರ್ಷದಲ್ಲಿ ವಿಚಾರಣೆ ಮುಗಿಸಿ ಅಂತಿಮ ತೀರ್ಪು ಹೊರಡಿಸುವಂತೆಯೂ ಆದೇಶ ನೀಡಿದೆ.
ಲಕ್ನೋ(ಮೇ 30): ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ್ ಜೋಷಿ, ಉಮಾಭಾರತಿ ಮೊದಲಾದವರಿಗೆ ಸಿಬಿಐ ವಿಶೇಷ ನ್ಯಾಯಾಲಯ ಇಂದು ಜಾಮೀನು ಮಂಜೂರು ಮಾಡಿದೆ. ಆದರೆ, ಸುಪ್ರೀಂಕೋರ್ಟ್ ಆದೇಶದಂತೆ ಆಡ್ವಾಣಿ ಸೇರಿದಂತೆ 12 ಮಂದಿ ವಿರುದ್ಧ ನ್ಯಾಯಾಲಯವು ಸೆಕ್ಷನ್ 120ಬಿ ಅಡಿ ಆರೋಪಪಟ್ಟಿ ದಾಖಲಿಸಿಕೊಳ್ಳಲಿದೆ. ಆರೋಪ ಪಟ್ಟಿ ದಾಖಲಿಸದಂತೆ ಕೋರಿ ಆರೋಪಿಗಳು ಸಲ್ಲಿಸಿದ ಅರ್ಜಿಯನ್ನು ಸಿಬಿಐ ಕೋರ್ಟ್ ವಜಾಗೊಳಿಸಿತು.
ಸಿಬಿಐ ನ್ಯಾಯಾಲಯ ಇಂದು ಲಾಲಕೃಷ್ಣ ಆಡ್ವಾಣಿ, ಮುರಳಿ ಮನೋಹರ್ ಜೋಷಿ, ಉಮಾ ಭಾರತಿ, ವಿನಯ್ ಕಟಿಯಾರ್, ಸಾಧ್ವಿ ರಿತಂಬರಾ ಮತ್ತು ವಿಷ್ಣು ಹರಿ ದಾಲ್ಮಿಯಾ ಅವರಿಗೆ 50 ಸಾವಿರ ರೂ ಬಾಂಡ್ ಪಡೆದು ಜಾಮೀನು ಮಂಜೂರು ಮಾಡಲಾಗಿದೆ.
ಮಾಜಿ ಉಪ ಪ್ರಧಾನಿ ಎಲ್.ಕೆ.ಆಡ್ವಾಣಿ ಕಳೆದ 25 ವರ್ಷಗಳಲ್ಲಿ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು ಇದು ಎರಡನೇ ಬಾರಿಗೆ. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಬಾಬ್ರಿ ಪ್ರಕರಣದಲ್ಲಿ ಎಲ್ಲಾ 12 ಆರೋಪಿಗಳ ವಿರುದ್ಧ ವಿಚಾರಣೆ ನಡೆಯಲಿದೆ. ಆರೋಪಿಗಳ ವಿರುದ್ಧ 1 ತಿಂಗಳಲ್ಲಿ ಚಾರ್ಜ್'ಶೀಟ್ ಫೈಲ್ ಮಾಡುವಂತೆ ಸಿಬಿಐ ನ್ಯಾಯಾಲಯಕ್ಕೆ ಸುಪ್ರೀಂ ನಿರ್ದೇಶನ ನೀಡಿತ್ತು. ಅಷ್ಟೇ ಅಲ್ಲ, 2 ವರ್ಷದಲ್ಲಿ ವಿಚಾರಣೆ ಮುಗಿಸಿ ಅಂತಿಮ ತೀರ್ಪು ಹೊರಡಿಸುವಂತೆಯೂ ಆದೇಶ ನೀಡಿದೆ.
ಏನಿದು ಪ್ರಕರಣ?
1992, ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿ ಸೇರಿದ್ದ ಸಾವಿರಾರು ಕರಸೇವಕರ ಪೈಕಿ ಒಂದು ಗುಂಪು ಬಾಬ್ರಿ ಮಸೀದಿ ಕಟ್ಟಡವನ್ನು ಕೆಡವಿತ್ತು. ಮಸೀದಿ ಕೆಡವಲು ಕರಸೇವಕರಿಗೆ ತಮ್ಮ ಭಾಷಣಗಳ ಮೂಲಕ ಪ್ರಚೋದನೆ ನೀಡಿದ ಆರೋಪ ಆಡ್ವಾಣಿ ಸೇರಿದಂತೆ 12 ಮಂದಿ ವಿರುದ್ಧವಿದೆ. ಮಸೀದಿ ಕೆಡವಿದ್ದು ದೇಶದ ಜಾತ್ಯತೀತ ಸಂಪ್ರದಾಯಕ್ಕೆ ಧಕ್ಕೆ ತರುವಂಥದ್ದಾಗಿದ್ದು, ಅದಕ್ಕೆ ಕುಮ್ಮಕ್ಕು ಕೊಟ್ಟವರದ್ದು ಕ್ರಿಮಿನಲ್ ಸಂಚೆಂದು ಪರಿಗಣಿಸಬೇಕೆಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ನಾವೇನು ತಪ್ಪು ಮಾಡಿದ್ದೇವೆ?
ಈ ಪ್ರಕರಣದಲ್ಲಿ ನನ್ನನ್ನು ಆರೋಪಿ ಎಂದು ಒಪ್ಪಿಕೊಳ್ಳೋದಿಲ್ಲ. ಇಲ್ಲಿ ಯಾವ ಸಂಚೂ ಇಲ್ಲ. ತುರ್ತು ಪರಿಸ್ಥಿತಿಯಲ್ಲಿ ಹೇಗೆ ಸಾರ್ವಜನಿಕ ಚಳವಳಿ ರೂಪುಗೊಂಡಿತ್ತೋ ಅದೇ ಸ್ಥಿತಿ ಅಯೋಧ್ಯೆಯಲ್ಲಿತ್ತು. ಜನರು ಮುಗಿಬಿದ್ದು ಹೋದರೆ ತಾವೇನು ಮಾಡಲು ಸಾಧ್ಯವಿತ್ತು ಎಂದು ಉಮಾ ಭಾರತಿ ಹೇಳಿದ್ದಾರೆ.