ಐಟಿ ಕೆಲ್ಸ ಬಿಟ್ಟು ಕಾಡು ಸೇರಿದ ಸೂಪರ್ ಜೋಡಿ!
ಗೋರೂರ್ ಗೋವಿಂದ್ ತಾವು ಕಾಡು ಸೇರಿದ ಕತೆಯನ್ನು ಹೇಳುತ್ತಾ ಹೋದರು. ಯಾರೇ ಆದರೂ ನಂಬಲು ಕಷ್ಟವಾಗುವ ನಿರ್ಧಾರ ಅದು. ಮದುವೆಗೆ ಇನ್ನೂ ಎರಡು ವಾರ ಇದೆ ಎನ್ನುವಾಗಲೇ ಹುಡುಗ ಮತ್ತು ಹುಡುಗಿ ಇಬ್ಬರೂ ನಿರುದ್ಯೋಗಿಗಳಾಗಿದ್ದರು. ವೈಲ್ಡ್ಲೈಫ್ ಕನ್ಸರ್ವೇಷನ್ ಆಸಕ್ತಿ ಇತ್ತು. ಕಾಡಿಗೆ ಹೋಗಬೇಕು ಅನ್ನುವ ಆಸೆಯೂ ಇತ್ತು. ಅದರ ಜೊತೆ ಐಟಿ ಕೆಲಸ ಸಾಕಾಗಿ ಹೋಗಿತ್ತು. ಆದರೆ ಮುಂದೆ ಏನು ಮಾಡಬೇಕು ಅನ್ನುವುದು ಗೊತ್ತಿರಲಿಲ್ಲ. ಹಾಗಿರುವಾಗಲೇ ಗೋವಿಂದ್ ಕೆಲಸ ತೊರೆದರು. ತನ್ನ ಪತಿ ಎಲ್ಲಿರುತ್ತಾರೋ ತಾನೂ ಅಲ್ಲೇ ಇರಬೇಕು ಅಂದುಕೊಂಡ ಶ್ವೇತಾ ಕೂಡ ಗೋವಿಂದ್ ದಾರಿಯನ್ನೇ ಹಿಡಿದರು
ಮದುವೆಗೆ ಎರಡು ವಾರಗಳಷ್ಟೇ ಬಾಕಿ ಉಳಿದಿದ್ದುವು. ನನಗೆ ಪರಿಸರ ರಕ್ಷಣೆ, ಕಾಡು ಪ್ರಾಣಿಗಳ ರಕ್ಷಣೆಗೆ ಕೆಲಸ ಮಾಡುವುದು ಅಂದರೆ ಬಹಳ ಆಸಕ್ತಿ. ನನ್ನ ಹುಡುಗಿ ಶ್ವೇತಾ ಜೊತೆ ನಾನು ಆ ಬಗ್ಗೆಯೇ ಮಾತನಾಡುತ್ತಿದ್ದೆ. ಅದನ್ನು ಕೇಳಿಸಿಕೊಳ್ಳುತ್ತಿದ್ದ ಶ್ವೇತಾ ಒಂದು ದಿನ ಚಾಟ್ ಮಾಡುತ್ತಾ ‘ಬರೀ ಮಾತಾಡ್ತಾನೇ ಇರ್ತೀರಾ, ಇಲ್ಲ ಏನಾದ್ರೂ ಮಾಡ್ತೀರಾ' ಎಂದು ಕೇಳಿದಳು. ನಂಗೆ ಒಂದು ಕ್ಷಣ ಶಾಕ್. ಸುಮ್ಮನಾದೆ. ಆಮೇಲೆ ಒಂದು ನಿರ್ಧಾರಕ್ಕೆ ಬಂದೆ. ನಾನು ಕೆಲಸ ಮಾಡುತ್ತಿದ್ದ ಸಂಸ್ಥೆಗೆ ಇಮೇಲ್ನಲ್ಲಿ ರಾಜೀನಾಮೆ ಕಳಿಸಿದೆ. ತಕ್ಷಣ ಶ್ವೇತಾಳಿಂದ ಫೋನ್ ಬಂತು. ಯಾಕೆಂದರೆ ರಾಜೀನಾಮೆ ಪತ್ರದ ಕಾಪಿಯನ್ನು ಶ್ವೇತಾಳಿಗೂ ಕಳಿಸಿದ್ದೆ. ಈಗ ಅವಳು ಶಾಕ್ ಆಗಿದ್ದಳು. ಏನ್ ಮಾಡ್ತೀರಾ ಎಂದು ಕೇಳಿದಳು. ಏನೂ ಪ್ಲಾನ್ ಇಲ್ಲ ಅಂದೆ. ನಿಜಕ್ಕೂ ಮುಂದೇನು ಅನ್ನುವುದು ಗೊತ್ತಿರಲಿಲ್ಲ. ಶ್ವೇತಾ ಏನೂ ಹೇಳದೆ ಫೋನಿಟ್ಟಳು. ಹದಿನೈದು ಇಪ್ಪತ್ತು ನಿಮಿಷ ಕಳೆದಿರಬಹುದು. ಶ್ವೇತಾಳಿಂದ ನಂಗೊಂದು ಇಮೇಲ್ ಬಂತು. ಶ್ವೇತಾ ಇನ್ಫೋಸಿಸ್ ಕಂಪನಿಗೆ ರಾಜೀನಾಮೆ ನೀಡಿದ್ದಳು.'
ಗೋರೂರ್ ಗೋವಿಂದ್ ತಾವು ಕಾಡು ಸೇರಿದ ಕತೆಯನ್ನು ಹೇಳುತ್ತಾ ಹೋದರು. ಯಾರೇ ಆದರೂ ನಂಬಲು ಕಷ್ಟವಾಗುವ ನಿರ್ಧಾರ ಅದು. ಮದುವೆಗೆ ಇನ್ನೂ ಎರಡು ವಾರ ಇದೆ ಎನ್ನುವಾಗಲೇ ಹುಡುಗ ಮತ್ತು ಹುಡುಗಿ ಇಬ್ಬರೂ ನಿರುದ್ಯೋಗಿಗಳಾಗಿದ್ದರು. ವೈಲ್ಡ್ಲೈಫ್ ಕನ್ಸರ್ವೇಷನ್ ಆಸಕ್ತಿ ಇತ್ತು. ಕಾಡಿಗೆ ಹೋಗಬೇಕು ಅನ್ನುವ ಆಸೆಯೂ ಇತ್ತು. ಅದರ ಜೊತೆ ಐಟಿ ಕೆಲಸ ಸಾಕಾಗಿ ಹೋಗಿತ್ತು. ಆದರೆ ಮುಂದೆ ಏನು ಮಾಡಬೇಕು ಅನ್ನುವುದು ಗೊತ್ತಿರಲಿಲ್ಲ. ಹಾಗಿರುವಾಗಲೇ ಗೋವಿಂದ್ ಕೆಲಸ ತೊರೆದರು. ತನ್ನ ಪತಿ ಎಲ್ಲಿರುತ್ತಾರೋ ತಾನೂ ಅಲ್ಲೇ ಇರಬೇಕು ಅಂದುಕೊಂಡ ಶ್ವೇತಾ ಕೂಡ ಗೋವಿಂದ್ ದಾರಿಯನ್ನೇ ಹಿಡಿದರು.
ಅಪರೂಪದ ಪ್ರೇಮಿಗಳು
ಬೆಂಗಳೂರಲ್ಲಿರುವ ಬಹುತೇಕರಿಗೆ ಈ ನಗರದ ಜಂಜಾಟದಿಂದ ದೂರ ಹೋಗಬೇಕು ಅನ್ನೋ ಆಸೆ ಇರುತ್ತದೆ. ಆದರೆ ಬಿಟ್ಟು ಹೋಗಲು ಸಾಧ್ಯವಾಗುವುದಿಲ್ಲ. ಅಂಥದ್ದರಲ್ಲಿ ಗೋವಿಂದ್ ಮತ್ತು ಶ್ವೇತಾ ದಂಪತಿ ಕಾಡು ಸೇರಿ ಕಾಡಿನ ರಕ್ಷಣೆಗಾಗಿ ದುಡಿಯುತ್ತಿರುವುದು ಎಲ್ಲರಿಗೂ ಸ್ಫೂರ್ತಿ. ಅದರಲ್ಲೂ ಶ್ವೇತಾ ತನ್ನ ಪತಿ ಗೋವಿಂದ್ಗೆ ಒತ್ತಾಸೆಯಾಗಿ ನಿಂತಿದ್ದು ನಿಜವಾಗಲೂ ಅದ್ಭುತವೇ. ನಗರದಲ್ಲಿರುವವರಿಗೆ ಕಾಡಿನ ಬದುಕು ಒಗ್ಗುವುದು ಕಷ್ಟ. ಆದರೆ ಶ್ವೇತಾ ಯಾವುದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ.
ಇಂಟರೆಸ್ಟಿಂಗ್ ಅಂದರೆ ಗೋವಿಂದ್ ಮತ್ತು ಶ್ವೇತಾರನ್ನು ಒಟ್ಟು ಗೂಡಿಸಿದ್ದು ಕೂಡ ಕಾಡು. ಐಟಿ ಕಂಪನಿಯಲ್ಲಿ ಟ್ರೆಕ್ಕಿಂಗ್ ಹೋಗುತ್ತಿದ್ದಾಗ ಇಬ್ಬರಿಗೂ ಪರಿಚಯವಾಗಿದೆ. ಪರಿಚಯ ಮಾತಿಗೆ ತಿರುಗಿ ಕಾಡು, ಕಾಡು ಪ್ರಾಣಿಗಳ ಬಗ್ಗೆ ಚರ್ಚೆ ಶುರುವಾಗಿದೆ. ಹಾಗಾಗಿಯೇ ಇಬ್ಬರು ಆತ್ಮೀಯರಾಗಿ ಮದುವೆಯಾಗುವ ನಿರ್ಧಾರ ಮಾಡಿದ್ದರು.
ಕೆಲಸ ಬಿಟ್ಟಮೇಲೆ...
ಐಟಿ ಕೆಲಸ ಬಿಟ್ಟಮೇಲೆ ಸ್ವಲ್ಪ ದಿನ ಏನೂ ಮಾಡಲಿಲ್ಲ. ಅನಂತರ ಉತ್ತರ ಪ್ರದೇಶ ಮತ್ತು ನೇಪಾಳದ ಗಡಿಯಲ್ಲಿರುವ ದೂದ್ವಾದಲ್ಲಿ ಬಿಲ್ಲಿ ಅರ್ಜನ್ ಸಿಂಗ್ ಅವರ ಪಾರ್ಕ್ನಲ್ಲಿ ಕೆಲಸಕ್ಕೆ ಸೇರಿದರು. ಬಿಲ್ಲಿ ಅರ್ಜನ್ ಸಿಂಗ್ ಎಂದರೆ ಗೋವಿಂದ್ಗೆ ಬಹಳ ಇಷ್ಟ. ಅಲ್ಲಿ ಒಂದೂವರೆ ವರ್ಷ ಕೆಲಸ ಮಾಡಿದರು. ಅಲ್ಲಿ ಬುಡಕಟ್ಟು ಜನರಿಗೆ ಪಾಠ ಮಾಡುತ್ತಾ ಕಾಡಿನ ಜೊತೆ, ಕಾಡು ಪ್ರಾಣಿಗಳ ಜೊತೆ ಒಡನಾಡುತ್ತಾ ಕಾಲ ಕಳೆದರು. ನಂತರ ಸ್ವಲ್ಪ ಸಮಯ ಅಲ್ಲಿಂದ ಹಿಮಾಚಲ ಪ್ರದೇಶಕ್ಕೆ ಹೋಗಿ ಅಲ್ಲಿ ಹಿಮಾಲಯ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡರು.
ಸದ್ಯ ಈ ದಂಪತಿ ತಮಿಳುನಾಡಿನ ಮರಕ್ಕಾಣಂ ಎಂಬ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿ ಮೂರು ಆನೆಗಳಿವೆ. ಈ ದಂಪತಿಗಳಿಗೆ ಆ ಆನೆಗಳನ್ನು ನೋಡಿಕೊಳ್ಳುವ ಕೆಲಸ. ಆನೆಗಳನ್ನು ದೇವರಂತೆ ಕೆಲಸ ಮಾಡುತ್ತಾ ಆ ಕೆಲಸದಲ್ಲೇ ಖುಷಿ ಕಾಣುತ್ತಿದ್ದಾರೆ ಈ ದಂಪತಿ.