Asianet Suvarna News Asianet Suvarna News

ಡಾನ್ ಜಯರಾಜ್ ಪಾತ್ರದಲ್ಲಿ ಉಪ್ಪಿ

ಪೈಕಿ ಜಯರಾಜ್ ಕತೆಗೆ ಮಾತ್ರ ಫಿಕ್ಸ್ ಮಾಡಿಕೊಂಡು ಸಿನಿಮಾ ಮಾಡುವುದಕ್ಕೆ ಹೊರಟಿದ್ದಾರೆ ನಿರ್ದೇಶಕ

Uppi act as don jayaraj

ಕನ್ನಡದ ಮಟ್ಟಿಗೆ ಅಂಡರ್‌ವರ್ಲ್ಡ್ ಸಿನಿಮಾ ಎಂದಾಕ್ಷಣ ನೆನಪಾಗುವ ಸಿನಿಮಾ ‘ಓಂ’. ಒಂದು ರೀತಿಯಲ್ಲಿ ಗಾಂನಗರದ ಭೂಗತ ಕತೆಗಳಿಗೆ ‘ಓಂ’ ಗಾಡ್‌ಫಾದರ್ ಇದ್ದಂತೆ. ಹೀಗೆ ನಿರ್ದೇಶಕನಾಗಿ ತೆರೆ ಮೇಲೆ ಡಾನ್ ಕತೆ ಹೇಳಿದ ಉಪೇಂದ್ರ ಅವರೇ ಈಗ ಡಾನ್ ಆಗುವುದಕ್ಕೆ ಹೊರಟಿದ್ದಾರೆ. ಹೌದು, ಉಪ್ಪಿ, ಡಾನ್ ಪಾತ್ರ ಮಾಡಲಿದ್ದಾರೆ. ಬೆಂಗಳೂರು ಭೂಗತಲೋಕ ಎಂದಾಗ ಮೊದಲು ನೆನಪಾಗುವ ಹೆಸರುಗಳು ಜಯರಾಜ್ ಮತ್ತು ಕೊತ್ವಾಲ್ ರಾಮಚಂದ್ರ. ಈ ಇಬ್ಬರ ಕತೆಯನ್ನು ಈಗಾಗಲೇ ‘ಆ ದಿನಗಳು’ ಚಿತ್ರದಲ್ಲಿ ನಿರ್ದೇಶಕ ಕೆ ಎಂ ಚೈತನ್ಯ ಹೇಳಿದ್ದಾರೆ. ಆದರೆ, ಈ ಪೈಕಿ ಜಯರಾಜ್‌ನ ಕತೆಗೆ ಮಾತ್ರ ಫಿಕ್ಸ್ ಮಾಡಿಕೊಂಡು ಸಿನಿಮಾ ಮಾಡುವುದಕ್ಕೆ ಹೊರಟಿದ್ದಾರೆ ನಿರ್ದೇಶಕ ಲೋಹಿತ್. ಈ ಹಿಂದೆ ‘ಮಮ್ಮಿ’ ಚಿತ್ರದ ಮೂಲಕ ಭರವಸೆ ಮೂಡಿಸಿದವರೇ ಈ ಲೋಹಿತ್. ಈಗ ಬೆಂಗಳೂರಿನ ಆ ದಿನಗಳ ಡಾನ್ ಜಯರಾಜ್ ಬದುಕಿನ ಪುಟಗಳಿಗೆ ಕೈ ಹಾಕಿದ್ದಾರೆ.

ಲೋಹಿತ್ ನಿರ್ದೇಶನ ಮಾಡಲು ಹೊರಟಿರುವ ಈ ಚಿತ್ರದಲ್ಲಿ ಜಯರಾಜ್ ಪಾತ್ರದಲ್ಲಿ ನಟ ಉಪೇಂದ್ರ ಕಾಣಿಸಿಕೊಳ್ಳುತ್ತಾರೆಂಬ ಸುದ್ದಿ ಇದೆ. ಅರ್ಥಾರ್ತ್ ಈ ಚಿತ್ರದ ನಾಯಕ ಉಪೇಂದ್ರ ಎನ್ನುವ ಮಾತುಗಳು ಇವೆ. ಅಲ್ಲದೆ ‘ಮಮ್ಮಿ’ ಸಿನಿಮಾ ನೋಡಿ ಖುಷಿಯಾಗಿರುವ ಉಪೇಂದ್ರ ಕೂಡ ಲೋಹಿತ್ ಜತೆ ಸಿನಿಮಾ ಮಾಡುವುದಕ್ಕೆ ಆಸಕ್ತಿ ತೋರಿದ್ದಾರಂತೆ. ಆದರೆ, ಈಗಷ್ಟೆ ಕತೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಲೋಹಿತ್, ಆ ನಿಟ್ಟಿನಲ್ಲಿ ಅಗ್ನಿ ಶ್ರೀಧರ್ ಅವರನ್ನು ಭೇಟಿ ಮಾಡಿದ್ದಾರಂತೆ. ಅಲ್ಲಿಗೆ ಡಾನ್ ಜಯರಾಜ್ ಬದುಕಿನ ಪುಟಗಳು ತೆರೆ ಮೇಲೆ ಬರಲಿದ್ದು, ಅಂದುಕೊಂಡಂತೆ ಉಪೇಂದ್ರ ಅವರೇ ನಾಯಕನಾಗುತ್ತಾರೆಯೇ? ಎಂಬುದು ಸದ್ಯದ ಕುತೂಹಲ. ಇನ್ನು ಚಿತ್ರಕ್ಕೆ ‘ಜಯರಾಜ್’ ಎನ್ನುವ ಹೆಸರಿಡುವ ಯೋಚನೆಯಲ್ಲಿದ್ದಾರೆ ಲೋಹಿತ್. ಮೊದಲ ಪ್ರಯತ್ನದಲ್ಲಿ ಹಾರರ್ ಚಿತ್ರ ಮಾಡಿದವರು ಈಗ ಭೂಗತ ಲೋಕದ ನೈಜ ವ್ಯಕ್ತಿಯೊಬ್ಬನ ಕತೆ ಹೇಳುವುದಕ್ಕೆ ಹೊರಟಿದ್ದಾರೆ ಲೋಹಿತ್.

Follow Us:
Download App:
  • android
  • ios