ಬೇರೆ ಜಾತಿ ಯುವಕನನ್ನು ಮದ್ವೆಯಾಗಿದ್ದೇ ತಪ್ಪಾ?: ಮಹಿಳೆ, ಮಗುವಿಗೆ ಗ್ರಾಮದಿಂದ ಬಹಿಷ್ಕಾರ
ಇಲ್ಲೊಬ್ಬ ತಾಯಿ ಮತ್ತು ಮಗು ಮಾಡಬಾರದ ತಪ್ಪನ್ನೇನು ಮಾಡಿಲ್ಲ, ಅಪರಾಧಿ ಸ್ಥಾನದಲ್ಲೂ ನಿಂತಿಲ್ಲ. ಆದರೂ, ಗ್ರಾಮಸ್ಥರ ಪಾಲಿಗೆ ಅವರು ತಪ್ಪಿತಸ್ಥರು. ತಾಯಿ ಬಿಡಿ, ಪ್ರಪಂಚದ ಜ್ಞಾನವನ್ನೂ ಅರಿಯದ ಎರಡು ವರ್ಷದ ಪುಟ್ಟ ಕಂದಮ್ಮ ಊರಿನವರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ.
ಮಂಡ್ಯ(ಎ.08): ಇಲ್ಲೊಬ್ಬ ತಾಯಿ ಮತ್ತು ಮಗು ಮಾಡಬಾರದ ತಪ್ಪನ್ನೇನು ಮಾಡಿಲ್ಲ, ಅಪರಾಧಿ ಸ್ಥಾನದಲ್ಲೂ ನಿಂತಿಲ್ಲ. ಆದರೂ, ಗ್ರಾಮಸ್ಥರ ಪಾಲಿಗೆ ಅವರು ತಪ್ಪಿತಸ್ಥರು. ತಾಯಿ ಬಿಡಿ, ಪ್ರಪಂಚದ ಜ್ಞಾನವನ್ನೂ ಅರಿಯದ ಎರಡು ವರ್ಷದ ಪುಟ್ಟ ಕಂದಮ್ಮ ಊರಿನವರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ.
ಮಂಡ್ಯದ ಬಿ.ಹಟ್ನ ಗ್ರಾಮದ ಸಾಕಮ್ಮ ದಲಿತ ಜಾತಿಯ ಮಾದಿಗ ಜನಾಂಗಕ್ಕೆದವಳು. ಆಕೆ ಮೂರು ವರ್ಷದ ಹಿಂದೆ ಪಕ್ಕದ ದುದ್ದ ಗ್ರಾಮದ ಪರಿಶಿಷ್ಟ ವರ್ಗದ ಯುವಕ ಅಪ್ಪಾಜಿ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದಳು. ಈ ಕಾರಣಕ್ಕೆ ದಲಿತ ಜಾತಿಗೆ ಸೇರಿದ ಯುವತಿಗೆ ಬಿ. ಹಟ್ನ ಗ್ರಾಮದ ದಲಿತ ಮುಖಂಡರೇ ಸಾಮಾಜಿಕ ಬಹಿಷ್ಕಾರ ಹಾಕಿ ಹೊರಗಿಟ್ಟಿದ್ದರು.
ಪ್ರೀತಿಸಿ ಮದುವೆಯಾದ ಸಾಕಮ್ಮಳಿಗೆ ಒಂದು ಹೆಣ್ಣು ಮಗುವಾಗಿತ್ತು. ತನ್ನ ಮಗುವನ್ನು ಸಾಕಮ್ಮ ಬಿ. ಹಟ್ನ ಗ್ರಾಮದ ಅಮ್ಮನ ಮನೆಯಲ್ಲಿ ಬಿಟ್ಟಿದ್ದಳು. ಆದರೆ , ಇತ್ತೀಚೆಗೆ ಬಿ.ಹಟ್ನ ಗ್ರಾಮದಲ್ಲಿ ಹುಚ್ಚಮ್ಮ ದೇವಿ ಹಬ್ಬ ಮಾಡುವ ವಿಚಾರದಲ್ಲಿ ಅಜ್ಜಿಯ ಮನೆಯಲ್ಲಿ ಬೆಳೆಯುತ್ತಿದ್ದ ಸಾಕಮ್ಮಳ ಮಗು ದಲಿತ ಮುಖಂಡರ ಕಣ್ಣಿಗೆ ಬಿದ್ದಿದೆ. ತಾಯಿಯನ್ನು ಊರಿನಿಂದ ಹೊರಹಾಕಿದ್ದ ದಲಿತ ಮುಖಂಡರು ಈಗ ಮಗುವನ್ನೂ ಊರಿನಿಂದ ಬಹಿಷ್ಕರಿಸಿದ್ದಾರಂತೆ. ಇದರಿಂದ ಮಾನಸಿಕವಾಗಿ ಸಾಕಮ್ಮ ಮತ್ತು ಆಕೆಯ ಮನೆಯವರು ಕುಸಿದು ಹೋಗಿದ್ದಾರೆ. ಯಾರು ಮಾಡದ ತಪ್ಪು ಮಾಡಿದನೆಂಬ ಕಾರಣಕ್ಕೆ ತವರಿನಿಂದ ದೂರವಾಗಿದ್ದೆ . ಆದರೆ ಈಗ ಏನೂ ತಪ್ಪು ಮಾಡದ ನನ್ನ ಕಂದಮ್ಮನಿಗೆ ಇದ್ಯಾವ ಶಿಕ್ಷೆ ಅಂತಾ ಪರಿತಪಿಸುತ್ತಾ ನ್ಯಾಯ ಕೊಡಿಸಿ ಅಂತಿದ್ದಾಳೆ ಸಾಕಮ್ಮ.
ಜಾತಿಗೆ ಜಾತಿ ವೈರಿ, ನೀರಿಗೆ ಪಾಚಿ ವೈರಿ ಎಂಬ ಗಾದೆ ಮಾತಿನಂದೆ ಒಂದೇ ಕೋಮಿಗೆ ಸೇರಿದ ಈ ಜನರಲ್ಲೇ ಈ ರೀತಿ ದೌರ್ಜನ್ಯ ನಡೆಯುತ್ತಿರುವುದು ಇಡೀ ಮಾನವ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಅದರಲ್ಲೂ ಈ ಜಾತಿ ವ್ಯವಸ್ಥೆ ಪುಟ್ಟ ಕಂದಮ್ಮನನ್ನು ಬಲಿಪಶು ಮಾಡಲು ಹೊರಟಿರುವುದು ಅಕ್ಷಮ್ಯ. ಇನ್ನಾದರೂ ಮನುಷ್ಯರು ಜಾತಿ ವ್ಯವಸ್ಥೆ ಬಿಟ್ಟು ಬದುಕುವ ಮೂಲಕ ಮಾನವೀಯತೆ ಎತ್ತಿ ಹಿಡಿಯಬೇಕಿದೆ.